Site icon PowerTV

ಪರಮೇಶ್ವರರನ್ನು ಡಮ್ಮಿ ಮಂತ್ರಿ ಮಾಡಿ ಕೂರಿಸಿದ್ದಾರೆ : ಬಿಜೆಪಿ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರನ್ನು ಡಮ್ಮಿ ಮಂತ್ರಿ ಮಾಡಿ ಕೂರಿಸಿದ್ದಾರೆ ಎಂದು ಬಿಜೆಪಿ ಸಿದ್ದರಾಮಯ್ಯ ಅವರ ಕಾಲೆಳೆದಿದೆ.

ಈ ಕುರಿತು xನಲ್ಲಿ ಪೋಸ್ಟ್​ ಮಾಡಿರುವ ರಾಜ್ಯ ಬಿಜೆಪಿ, ವಿಪಕ್ಷ ಸ್ಥಾನದ ಹುದ್ದೆಗೆ ಅಡ್ಡಗಾಲಾಗಿದ್ದರು ಎಂಬ ಏಕೈಕ ಕಾರಣಕ್ಕೆ ಮಲ್ಲಿಕಾರ್ಜುನ ಖರ್ಗೆಯವರನ್ನು ಲೋಕಸಭೆಗೆ ಕಳುಹಿಸಿದ ಸ್ವಾರ್ಥಿ ಸಿದ್ದರಾಮಯ್ಯರವರು ಎಂದು ಕುಟುಕಿದೆ.

ಮತ್ತೊಬ್ಬರನ್ನು ರಾಜಕೀಯವಾಗಿ ತುಳಿಯುವುದು ಸಿದ್ದರಾಮಯ್ಯ ಅವರ ಗುಣ. 2013ರಲ್ಲಿ ಕೊರಟಗೆರೆಯಲ್ಲಿ ಡಾ.ಜಿ ಪರಮೇಶ್ವರ್ ಅವರು ಸೋಲುವಂತೆ ನೋಡಿಕೊಂಡಿದ್ದರು. ಅಲ್ಲದೆ, ಇದೀಗ ಅವರ ಗೃಹ ಇಲಾಖೆಗೆ ಉಳಿದವರು ಹಸ್ತಕ್ಷೇಪ ಮಾಡಲು ಕುಮ್ಮಕ್ಕು ನೀಡಿ ಉದ್ದೇಶಪೂರ್ವಕವಾಗಿ ಪರಮೇಶ್ವರರನ್ನು ಡಮ್ಮಿ ಮಂತ್ರಿ ಮಾಡಿ ಕೂರಿಸಿದ್ದಾರೆ ಎಂದು ಲೇವಡಿ ಮಾಡಿದೆ.

ವೀರಶೈವಲಿಂಗಾಯತರೆಲ್ಲರೂ ಭ್ರಷ್ಟರು

ರಾಜ್ಯದ ವೀರಶೈವ-ಲಿಂಗಾಯತ ಸಮುದಾಯದ ವಿರುದ್ದವಂತೂ ಪದೇ ಪದೆ ಸಿಎಂ ಸಿದ್ದರಾಮಯ್ಯ ಅವರು ದ್ವೇಷ ಕಾರಿಕೊಳ್ಳುತ್ತಿದ್ದಾರೆ. ಚುನಾವಣೆಗೂ ಮುನ್ನ, ವೀರಶೈವ-ಲಿಂಗಾಯತರೆಲ್ಲರೂ ಭ್ರಷ್ಟರು ಎಂದು ಜರಿದಿದ್ದನ್ನು ರಾಜ್ಯದ ಜನ ಇನ್ನೂ ಮರೆತಿಲ್ಲ ಎಂಬುದನ್ನು ಸಿದ್ದರಾಮಯ್ಯರವರು ಅರಿತುಕೊಳ್ಳುವುದು ಒಳಿತು ಎಂದು ಚಾಟಿ ಬೀಸಿದೆ.

ಕೈ ನಾಯಕರೇ ರೋಸಿ ಹೋಗಿದ್ದಾರೆ

ಒಟ್ಟಿನಲ್ಲಿ ಸಿದ್ದರಾಮಯ್ಯರವರ ನಾಯಕತ್ವ ಮತ್ತವರ ತುಷ್ಟೀಕರಣದ ರಾಜಕಾರಣ ಹಾಗೂ ಸ್ವಜನಪಕ್ಷಪಾತದಿಂದ ಕೈ ಪಕ್ಷದ ನಾಯಕರೇ ರೋಸಿ ಹೋಗಿರುವುದು ಅವರ ಹೇಳಿಕೆಗಳಿಂದಲೇ ಸಾಬೀತಾಗುತ್ತಿದೆ ಎಂದು ವಾಗ್ದಾಳಿ ನಡೆಸಿದೆ.

Exit mobile version