Site icon PowerTV

ಇವರದ್ದು ಬರೀ ಸೂಟ್​ಕೇಸ್ ಸಂಬಂಧವಾ? : ಸಿ.ಟಿ. ರವಿ

ಮಂಡ್ಯ : ತಮಿಳುನಾಡು ಪ್ರಭಾರಿಯಾಗಿ ಕೆಲಸ‌ ಮಾಡಿದ್ದೇನೆ. ಎಲೆಕ್ಷನ್ ವೇಳೆ ಇಲ್ಲಿಯವರು ಸೂಟ್​ಕೇಸ್ ಹಿಡಿದು ಬಂದಿದ್ರು. ಇಲ್ಲಿನ ಎಲೆಕ್ಷನ್‌ಗೆ ಅಲ್ಲಿಯವರು ಸೂಟ್‌ಕೇಸ್ ಹಿಡಿದು ಇಲ್ಲಿಗೆ ಬಂದಿದ್ರು. ಇವರದ್ದು ಬರೀ ಸೂಟ್‌ಕೇಸ್ ಸಂಬಂಧವಾ? ಅವರು ಇವರನ್ನ ಗೆಲ್ಲಿಸಲಿಕ್ಕೆ, ಇವರು ಅವರನ್ನ ಗೆಲ್ಲಿಸಲಿಕ್ಕೆ ಮಾತ್ರಾನಾ? ಎಂದು ಮಾಜಿ ಸಚಿವ ಸಿ.ಟಿ. ರವಿ ಕುಟುಕಿದರು.

ಮಂಡ್ಯದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅವರು, I.N.D.I.A (ಇಂಡಿಯಾ) ಮೈತ್ರಿಕೂಟದಲ್ಲಿ ತಮಿಳುನಾಡು ಕೂಡ ಇದೆ. ಎಲ್ಲರೂ ದೊಡ್ಡ ಸಮಾವೇಶ ಮಾಡಿ ಸೇರಿದ್ರು. ಆದರೆ, ಕಾವೇರಿ‌ ವಿಚಾರದಲ್ಲಿ ತಮಿಳುನಾಡು ಮಾತಕತೆಗೆ ಬರಲ್ಲ‌‌ ಅಂದ್ರೆ ಹೆಂಗೆ? ಎಂದು ಪ್ರಶ್ನಿಸಿದರು.

ಸ್ಟಾಲಿನ್ ಗೆದ್ದಾಗ ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಸ್ಮರಿಸಿದ್ರು. ಸಂಬಂಧ ಚೆನ್ನಾಗಿರುವಾಗ ರಾಜ್ಯದ ಸ್ಥಿತಿ ಮನವರಿಕೆ ಮಾಡಿ ನ್ಯಾಯ ಕೂಡಿಸಿ. ನೀರು ನಿಲ್ಲಿಸುವ ದಿಟ್ಟ ನಿರ್ಧಾರ ಮಾಡಿ. ಸುಪ್ರೀಂ ಕೋರ್ಟ್​ ನಿಮ್ಮನ್ನು ಜೈಲಿಗೆ ಹಾಕಲು ಮುಂದಾದರೆ. ನಿಮ್ಮ ಜೊತೆ 7 ಕೋಟಿ ಕನ್ನಡಿಗರು ಬರುತ್ತಾರೆ. 7 ಕೋಟಿ ಜನರನ್ನು ಕೂಡಿಡುವ ಜೈಲು ಪ್ರಪಂಚದಲ್ಲೇ ಇಲ್ಲ. ರೈತರ ಹೋರಾಟದ ಜೊತೆ ಕಾಯಾ ವಾಚಾ ಮನಸಾ ಇರ್ತೀನಿ ಎಂದು ಹೇಳಿದರು.

ಅಧಿಕಾರ ಕೊಟ್ಟಿದ್ದು ತಮಿಳುನಾಡು ಅಲ್ಲ

ನಾವು ಸಿಎಂ ಸ್ಟಾಲಿನ್ ಬಳಿ ಹೋಗಿ ಕಷ್ಟ ಹೇಳಿಕೊಳ್ಳಲಾಗುತ್ತಾ? ಪಕ್ಷಾತೀತವಾಗಿ ನಿಮ್ಮ ಪರ ನಿಲ್ತೀವಿ, ನೀರು ಬಿಡದಿರುವ ನಿಲುವು ತೆಗೆದುಕೊಳ್ಳಿ. ಅಧಿಕಾರ, ನಿಮ್ಮ ರಾಜಕೀಯ ಸಂಬಂಧ ಉಳಿಸಿಕೊಳ್ಳುವುದು ನಿಮಗೆ ಮುಖ್ಯಾವಾಗಿದೆ. ಅಟ್ಟ ಹತ್ತಿದ ಮೇಲೆ ಏಣಿ ಒದೆಯುವ ಕೆಲಸ‌ ಮಾಡ್ತಿದ್ದೀರಾ? ನಿಮಗೆ ಅಧಿಕಾರ ಕೊಟ್ಟದ್ದು ಕರ್ನಾಟಕದ ಜನ, ತಮಿಳುನಾಡು ಅಲ್ಲ ಎಂದು ಸಿ.ಟಿ. ರವಿ ಚಾಟಿ ಬೀಸಿದರು.

Exit mobile version