Site icon PowerTV

ಮೋದಿ ಯಾರಿಗೂ ಹೆದರಲ್ಲ, ಅವ್ರು ಪವರ್ ಫುಲ್ ಲೀಡರ್ : ಉಮೇಶ್ ಜಾಧವ್

ಕಲಬುರಗಿ : ನರೇಂದ್ರ ಮೋದಿ ಹೆದರುತ್ತಿದ್ದಾರೆ ಎನ್ನುವುದು ಶುದ್ದ ಸುಳ್ಳು. ಮೋದಿ ಅವರನ್ನು ಹೇಗೆ ಡೌನ್ ಮಾಡಬೇಕು ಎನ್ನುವುದು ಬಿಟ್ರೆ ಅವರಲ್ಲಿ ಬೇರೆ ವಿಚಾರಗಳೇ ಇಲ್ಲ. ಮೋದಿ, ಬಿಜೆಪಿ ಯಾರಿಗೂ ಹೆದರಲ್ಲ. ನರೇಂದ್ರ ಮೋದಿ ವಿಶ್ವದ ಒಬ್ಬ ಪವರ್ ಫುಲ್ ನಾಯಕರು ಎಂದು ಮೋದಿಯನ್ನು ಸಂಸದ ಉಮೇಶ್ ಜಾಧವ್ ಕೊಂಡಾಡಿದರು.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಹೆದರಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಕಾಂಗ್ರೆಸ್ ನಾಯಕರ ಹೇಳಿಕೆಗೆ ತಿರುಗೇಟು ನೀಡಿದರು.

ಜಿ-20 ಸಭೆಗೆ ಮಲ್ಲಿಕಾರ್ಜುನ ಖರ್ಗೆಗೆ ಆಹ್ವಾನಿಸಲಿಲ್ಲವೇ? ಎಂಬ ಪ್ರಶ್ನೆಗೆ, ಜಿ-20 ಸಮಾವೇಶವನ್ನು ಇಡೀ ಜಗತ್ತೇ ಕೊಂಡಾಡುತ್ತಿದೆ. ಕಾಂಗ್ರೆಸ್​ನವರಿಗೆ ಮಾತ್ರ ಇದರಲ್ಲಿ ನೆಗೆಟಿವ್ ಕಾಣಿಸುತ್ತಿದೆ. ಪ್ರೋಟೋಕಾಲ್ ಪ್ರಕಾರ ಎಲ್ಲವೂ ಮಾಡಲಾಗಿದೆ. ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಡ್ಡ ಅವರಿಗೂ ಆಹ್ವಾನ ನೀಡಲಿಲ್ಲ. ಆಗಸ್ಟ್ 15ರ ಧ್ವಜಾರೋಹಣಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರು ಏಕೆ ಹೋಗಿಲ್ಲ? ಎಂದು ಕುಟುಕಿದರು.

ಮೋದಿಯನ್ನ ದೂಷಿಸುವುದು ರೂಢಿ

ವಿಶೇಷ ಅಧಿವೇಶನ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕರೆದಿದ್ದಾರೆ ಅಂತ ಕಾಂಗ್ರೆಸ್ ನಾಯಕರು ಟೀಕಿಸಿದ್ದಾರೆ. ವಿಶೇಷ ಅಧಿವೇಶನ ಕರೆಯುವುದು ಸರ್ಕಾರ ನಿರ್ಧರಿಸುತ್ತದೆ. ಇವರು ಸುಮ್ಮನೆ ಸರ್ಕಾರಕ್ಕೆ ದೂಷಿಸುವುದನ್ನೇ ರೂಢಿಸಿಕೊಂಡಿದ್ದಾರೆ. ಮಹಾತ್ಮ ಗಾಂಧಿ ಸಮಾಧಿಗೆ ಸಂತಾಪ ಸಲ್ಲಿಸಲು ಇಡೀ ಜಗತ್ತೇ ಬಂದಂತಾಗಿದೆ. ಇಂತಹ ದೊಡ್ಡ ಯಶಸ್ಸು ಇವರಿಗೆ ನೆಗೆಟಿವ್ ಆಗಿ ಕಾಣುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಚಾಟಿ ಬೀಸಿದರು.

ಇಡೀ ಕರ್ನಾಟಕಕ್ಕೆ ಫಲ ಕೊಡುತ್ತದೆ

ಬಿಜೆಪಿ ಜೆಡಿಎಸ್ ಮೈತ್ರಿಯನ್ನು ನಾನು ಸ್ವಾಗತಿಸುವೆ. ನಮ್ಮ ನಮ್ಮ ಪಕ್ಷದ ವರಿಷ್ಠರಾದ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರೆನಿದ್ದರೂ ಪಕ್ಷಕ್ಕೆ ಒಳ್ಳೆಯದಾಗುವ ತೀರ್ಮಾನ ಮಾಡುತ್ತಾರೆ. ಇದರಿಂದ ಪಕ್ಷಕ್ಕೆ ಒಳ್ಳೆಯದಾಗುತ್ತದೆ ನಾವು ಇದನ್ನು ಸ್ವಾಗತಿಸುತ್ತೇವೆ. ಇದರಿಂದ ಕಲಬುರಗಿ ಮಾತ್ರ ಅಲ್ಲ ಇಡೀ ಕರ್ನಾಟಕಕ್ಕೆ ಫಲ ಕೊಡುತ್ತದೆ ಎಂದು ಹೇಳಿದರು.

Exit mobile version