Site icon PowerTV

ಕರೆಯದೇ ಬಂದವನನ್ನ… ಅಂತಾರೆ : BSY ವ್ಯಂಗ್ಯವಾಡಿದ ಕೃಷ್ಣಬೈರೇಗೌಡ

ಬೀದರ್ : ಮಾಜಿ ಮುಖ್ಯಮಂತ್ರಿ ಡಾ.ಬಿ.ಎಸ್ ಯಡಿಯೂರಪ್ಪ ಅವರ ಕುರಿತು ಮಾತನಾಡುವ ಭರದಲ್ಲಿ ಗಾದೆ ಮಾತಿನ ಮೂಲಕ ಸಚಿವ ಕೃಷ್ಣಬೈರೇಗೌಡ ವ್ಯಂಗ್ಯವಾಡಿ, ವಿವಾದ ಮೈ ಮೇಲೆ ಎಳೆದುಕೊಂಡಿದ್ದಾರೆ.

ಬೀದರ್​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕರೆಯದೇ ಬಂದವರನ್ನ .. ಏನೋ ಅಂತಾರೆ ಎಂದು ಗಾದೆ ಮಾತು ಹೇಳಿದ್ದಾರೆ.

ಬಿಜೆಪಿ ನಾವಿಕನಿಲ್ಲದ ದೋಣಿಯಾಗಿದೆ. ಅವರು ಯಾರನ್ನು ನಾಯಕ‌ ಮಾಡಿದ್ರು‌ ನಮಗೆ ಸಂಬಂಧವಿಲ್ಲ. ನಾವಿಕನಿಲ್ಲದೇ ಬಿಜೆಪಿ ಪಕ್ಷದ ದೋಣಿ ಅಲುಗಾಡುತಿದೆ. ಬಿಜೆಪಿ ಪಕ್ಷ ಮುಳಿಗುತ್ತಿದೆ ಅನ್ನೋ ಭಯ ಬಿಜೆಪಿ ಶಾಸಕರಿಗೆ‌ ಕಾಡ್ತಿದೆ ಎಂದು ಕುಟುಕಿದ್ದಾರೆ.

ಆಂತರಿಕ ಕಚ್ಚಾಟವೇ ಹೆಚ್ಚಾಗಿದೆ

ಕಾಂಗ್ರೆಸ್ ಸರ್ಕಾರ ರಚನೆಯಾಗಿ 100 ದಿನ ಕಳೆಯುತ್ತಾ ಬಂದರೂ, ವಿಪಕ್ಷ ನಾಯಕನ ಅಯ್ಕೆ‌ ಮಾಡುವ ಸಾಮರ್ಥ್ಯ ವಿಪಕ್ಷಗಳಿಗೆ ಇಲ್ಲ. ವಿಪಕ್ಷ ನಾಯಕನನ್ನು ಶ್ಯಾಡೋ ಸಿಎಂ ಅಂತಾರೆ. ಆದ್ರೆ, ರಾಜ್ಯದಲ್ಲಿ ವಿಪಕ್ಷ ನಾಯಕನ ಅಯ್ಕೆ ಮಾಡದೇ ರಾಜ್ಯಕ್ಕೆ ಅಪಮಾನ ‌ಮಾಡಲಾಗುತ್ತಿದೆ. ಬಿಜೆಪಿಯಲ್ಲಿ ಆಂತರಿಕ ಕಚ್ಚಾಟವೇ ಹೆಚ್ಚಾಗಿದೆ. ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ಆಯ್ಕೆ ಮಾಡಲಾಗದೆ ಒದ್ದಾಡುತ್ತಿದೆ. ಬಿಜೆಪಿ ಸಂಪೂರ್ಣ ಗೊಂದಲದ ಗೂಡಾಗಿದೆ ಎಂದು ಟೀಕಿಸಿದ್ದಾರೆ.

ಜೆಡಿಎಸ್ ‌ಕೂಡಾ ಅದೇ ರೀತಿ

ಜೆಡಿಎಸ್ ಪಕ್ಷ ‌ಕೂಡಾ ಅದೇ ರೀತಿಯಾಗಿದೆ. ಬೇರೆ ಪಕ್ಷಗಳಿಗೆ ಹೊಲಿಸಿದರೆ ನಮ್ಮ ಪಕ್ಷ ಜನಪರವಾಗಿದೆ. ಹಾಗಾಗಿ, ಬೇರೆ ಶಾಸಕರು ನಮ್ಮ‌ ಪಕ್ಷಕ್ಕೆ ಬರೋಕೆ ಮನಸ್ಸು ಮಾಡಿರಬಹುದು. ನನಗೆ ಎಷ್ಟು ಜನ ಬರ್ತಾರೆ ಅನ್ನೋ ಮಾಹಿತಿ‌ ಇಲ್ಲ ಎಂದು ಕೃಷ್ಣಬೈರೇಗೌಡ ಹೇಳಿದ್ದಾರೆ.

Exit mobile version