Site icon PowerTV

ಡಿಕೆಶಿ CM ಆಗಲಿ ಅಂತ ಹೇಳಿದ್ದು ನಾನೊಬ್ಬನೇ : ವಿ. ಸೋಮಣ್ಣ

ಬೆಂಗಳೂರು : ಅತೀ ಹೆಚ್ಚು, ನನಗಿಂತ ಹೆಚ್ಚು ಕಲಸ ಮಾಡುವ ವ್ಯಕ್ತಿ ಇದ್ರೆ ಅದು ಡಿಸಿಎಂ ಡಿ.ಕೆ ಶಿವಕುಮಾರ್ ಎಂದು ಡಿಕೆಶಿ ಪರ ಮಾಜಿ ಸಚಿವ ವಿ. ಸೋಮಣ್ಣ ಬ್ಯಾಟ್ ಬೀಸಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ ಶಿವಕುಮಾರ್ ಅವರಿಗೆ ಹುಂಬತನ ಇದೆ. ಆದರೆ, ಯಾರನ್ನೂ ಟಾರ್ಗೆಟ್ ಮಾಡೋರಲ್ಲ. ಡಿಕೆಶಿ ಅವರೇ ನಿಮಗೆ ಇನ್ನೊಂದೇ ಕುರ್ಚಿ ಉಳಿದಿರೋದು. ನಿಮ್ಮ ಅದೃಷ್ಟ ಇದ್ರೆ ಸಿಗುತ್ತೆ, ಇಲ್ಲ ಅಂದ್ರೆ ಇಲ್ಲ. ಇದು ನಮಗೆ ಬೇಡವಾದ ವಿಚಾರ ಎಂದು ಹೇಳಿದರು.

ಮಾನ್ಯ ಡಿ.ಕೆ ಶಿವಕುಮಾರ್ ಸಾಹೇಬ್ರೆ, ತನಿಖೆ ನೆಪದಲ್ಲಿ ಯಾರಿಗೂ ತೊಂದರೆ ನೀಡಬೇಡಿ. ಎಲ್ಲರೂ ಕೂಡ ಕೆಟ್ಟವರು ಎಂದ್ರೆ ಹೇಗೆ? ಈಗ ಡಾಕ್ಯುಮೆಂಟ್ ಕೊಡಿ ಎಂದರೆ, ಆಗ ನಮ್ಮ ಮೇಲೆ ಆರೋಪ ಮಾಡುವಾಗ ಏನು ಡಾಕ್ಯುಮೆಂಟ್ ನೀಡಿದ್ರಿ? ಡಿ.ಕೆ ಶಿವಕುಮಾರ್ ಅವರೇ, ನೀವು ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಡಿಸಿಎಂ ಅಲ್ಲ. ರಾಜ್ಯದ ಆರು ಕೋಟಿ ಜನರ ಉಪಮುಖ್ಯಮಂತ್ರಿ ಎಂದು ನಯವಾಗಿಯೇ ಕುಟುಕಿದರು.

ಗುತ್ತಿಗೆದಾರರು ಬಿಜೆಪಿಯವ್ರು ಅಂದ್ರೆ ಹೇಗೆ?

ಎಲ್ಲಾ ಗುತ್ತಿಗೆದಾರರು ಬಿಜೆಪಿಯವರು ಎಂದರೆ ಹೇಗೆ? ಅವರಿಗೆ ಪಕ್ಷ ಇಲ್ಲ. ಬಿಬಿಎಂಪಿ ಕಟ್ಟಡಕ್ಕೆ ಬೆಂಕಿ ಬಿದ್ದಿದ್ದು ಆಕಸ್ಮಿಕ. ಆದರೆ, ಮುಖ್ಯಮಂತ್ರಿ ಹೇಳ್ತಾರೆ , ಬಿಜೆಪಿಯವರು ಬೆಂಕಿ ಹಾಕಿದ್ದಾರೆ ಅಂತ. ಹೀಗೆ ಎಂದರೆ ಹೇಗೆ? ಎಂದು ವಾಗ್ದಾಳಿ ನಡೆಸಿದರು.

ಏಕಾಏಕಿ ಹೇಗೆ ಅಪ್ರಮಾಣಿಕರಾಗಿ ಹೋದ್ರು

ಇಷ್ಟು ದಿನ ಗುತ್ತಿಗೆದಾರರು ಒಳ್ಳೆಯವರು, ಪ್ರಮಾಣಿಕರಾಗಿದ್ರು. ಈಗ ಏಕಾಏಕಿ ಹೇಗೆ ಅಪ್ರಮಾಣಿಕರಾಗಿ ಹೋದರು‌. ಇಷ್ಟು ದಿನ ನೀವೆ ಹೇಳ್ತಾ ಇದ್ರಿ, ಅವರೆಲ್ಲ ಪ್ರಾಮಾಣಿಕರು ಅಂತ. ನೀವೆ ಹೇಳಿದ್ದು ಇಷ್ಟು ದಿನ. ಡಿ.ಕೆ ಶಿವಕುಮಾರ್ ಪಾರದರ್ಶಕವಾಗಿ ತನಿಖೆ ಮಾಡ್ತೇ‌ನೆ ಎಂದಿದ್ದಾರೆ. ಅದರ ಬಗ್ಗೆ ನನ್ನ ತಕರಾರು ಇಲ್ಲ ಎಂದು ಹೇಳಿದರು.

Exit mobile version