Site icon PowerTV

ಆರಗಗೆ ಬುದ್ದಿ ಭ್ರಮಣೆ, ಹುಚ್ಚಾಸ್ಪತ್ರೆಗೆ ಸೇರಿಸಬೇಕು : ಶಿವರಾಜ ತಂಗಡಗಿ

ಕೊಪ್ಪಳ : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಮಾಜಿ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ವಿಚಾರಕ್ಕೆ ಸಚಿವ ಶಿವರಾಜ ತಂಗಡಗಿ ಪ್ರತಿಕ್ರಿಯೆ ನೀಡಿದ್ದಾರೆ.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರಗಗೆ ಬುದ್ದಿ ಭ್ರಮಣೆಯಾಗಿದೆ. ಈ ಭಾಗಕ್ಕೆ ಖರ್ಗೆ ಕೊಡುಗೆ ಏನು ಎಂಬುದು ಗೊತ್ತಿಲ್ಲದೇ ಮಾತನಾಡಿದ್ದಾರೆ.‌ ಅವರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು‌ ಎಂದು ಕಿಡಿಕಾರಿದ್ದಾರೆ.

ಮಲ್ಲಿಕಾರ್ಜುನ ಖರ್ಗೆಯವರಿಗೆ ಮಾತ್ರ ಅಲ್ಲ ಇಡೀ ಕಲ್ಯಾಣ ಕರ್ನಾಟಕದ ಜನರಿಗೆ ಅಪಮಾನ ಆಗಿದೆ. ಆರಗ ಅವರು ಈ ಭಾಗದ ಜನರ ಬಳಿ ಕ್ಷಮೆ ಕೇಳಬೇಕು. ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಸ್ವಾಭಿಮಾನ ಇದ್ದರೆ, ಬಿಜೆಪಿ ಅವರು ಈ ಭಾಗದಲ್ಲಿ ಓಡಾಡದಂತೆ ಮಾಡಬೇಕು ಎಂದು ಗುಡುಗಿದ್ದಾರೆ.

ಬುದ್ದಿ ಹೇಳೋಕೆ ಆಗಲ್ವಾ?

ಮೋದಿ ಅಂತ ಹೆಸರು ಹೇಳಿದ್ದಕ್ಕೆ ರಾಹುಲ್ ಗಾಂಧಿ ಅವರ ಸಂಸತ್ ಸ್ಥಾನ ಅನರ್ಹ ಮಾಡಿದ್ದರು. ಇವರಿಗೆ ಬುದ್ದಿ ಹೇಳೋಕೆ ಆಗಲ್ವಾ? ಎಂದು ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಜ್ಞಾನೇಂದ್ರ ವಿರುದ್ಧ ದೂರು ದಾಖಲು

ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವಮಾನಿಸಿದ ಹಿನ್ನೆಲೆ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ದೂರು ದಾಖಲಾಗಿದೆ. ಸಾಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶ್ರೀಧರ್ ಎಂಬುವವರು ದೂರು ದಾಖಲಿಸಿದ್ದಾರೆ. ದಲಿತ ಸಮುದಾಯ ಹಾಗೂ ಹಿಂದುಳಿದ ಜಾತಿಗೆ ಅವಮಾನಿಸಿರುವ ಹಿನ್ನೆಲೆ ಜನಾಂಗೀಯ ನಿಂದನೆ ಮಾಡಿದ್ದಕ್ಕೆ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.

Exit mobile version