Site icon PowerTV

ನರಿಗಳು ಘೀಳಿಟ್ರೆ ಕಾಡಿನ ರಾಜ ಬೆದರೋದು ಉಂಟಾ? : ಸಿ.ಟಿ ರವಿ ಕೌಂಟರ್

ಚಿಕ್ಕಮಗಳೂರು : ನಮ್ಮ ಪ್ರಧಾನಿ ಮೋದಿ ಅನಭಿಷಕ್ತ ರಾಜನಿದ್ದಂತೆ. ನರಿಗಳು ಘೀಳಿಟ್ರೆ ಕಾಡಿನ ರಾಜ ಬೆದರೋದು ಉಂಟಾ? ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕೌಂಟರ್ ಕೊಟ್ಟರು.

ಲೋಕಸಭಾ ಚುನಾವಣೆಗೆ ವಿಪಕ್ಷಗಳ ಒಗ್ಗಟ್ಟು ಹಿನ್ನೆಲೆ ಚಿಕ್ಕಮಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿಯವರು ಪ್ರಜಾಪ್ರಭುತ್ವದಲ್ಲಿ ಜನರ ಹೃದಯದಲ್ಲಿ ಸ್ಥಾನ ಪಡೆದ ಸಾಮ್ರಾಟ. ಅಲ್ಲಿ-ಇಲ್ಲಿ ನರಿಗಳು ಘೀಳಿಟ್ರೆ ಹೃದಯ ಸಾಮ್ರಾಟ ಸಿಂಹ ಬೆದರೋದು ಉಂಟೇ? ಕಾಡಿನ ರಾಜ ಸಿಂಹನನ್ನು ಬೆದರಿಸೋಕೆ ಆಗುತ್ತಾ? ನೂರು ನರಿಗಳು ಘೀಳಿಟ್ರು ಕಾಡಿನ ರಾಜ‌ಸಿಂಹ ಅದರ ದಾರಿಯಲ್ಲಿ ನಡೆಯುತ್ತೆ ಎಂದು ಗುಡುಗಿದರು.

ನೂರು ವಿಪಕ್ಷ ಗಳಿಗೆ ಭಯ ಇದೆ, ಅದಕ್ಕೆ ಒಂದಾಗಿದ್ದಾರೆ. ಅವರ ಒಗ್ಗಟ್ಟು ದೇಶದ ಹಿತದೃಷ್ಟಿಯಿಂದಲ್ಲ. ಹಾಗಾಗಿ, ಅವರಿಗೆ ಹೆದರುವ ಅಗತ್ಯವಿಲ್ಲ. ಈಗ ನರಿಗಳ ಸಂಖ್ಯೆ ಕಡಿಮೆಯಾಗಿದೆ, ಅಪರೂಪಕ್ಕೆ ಸಿಗುತ್ತವೆ. ಮೊದಲು ಮಲೆನಾಡ ಗದ್ದೆ ಬಯಲಲ್ಲಿ ನರಿಗಳು ಇರುತ್ತಿದ್ದವು ಎಂದು ಲೇವಡಿ ಮಾಡಿದರು.

ಇದನ್ನೂ ಓದಿ : ಮೋದಿ ವಿರುದ್ಧ ವಿಪಕ್ಷಗಳಿಗೆ ಪ್ರಧಾನಿ ಅಭ್ಯರ್ಥಿಯೇ ಇಲ್ಲ : ಎನ್. ರವಿಕುಮಾರ್

ಶತ್ರುಗಳು ಇಲ್ಲ, ಮಿತ್ರರು ಇಲ್ಲ

ಲೋಕಸಭೆ ಚುನಾವಣೆಗೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ವಿಚಾರ ಕುರಿತು ಮಾತನಾಡಿ, ನೇಷನ್ ಫಸ್ಟ್, ಪಾರ್ಟಿ ನೆಕ್ಸ್ಟ್, ಪರ್ಸನ್ ಲಾಸ್ಟ್ ಅನ್ನೋ ತತ್ವದ ಮೇಲೆ ನಂಬಿಕೆ ಇಟ್ಟವರು. ನೇಷನ್ ಫಸ್ಟ್ ಎಂಬ ತತ್ವದ ಮೇಲೆ ಯಾರು ಬೇಕಾದರೂ ನಮ್ಮ ಜೊತೆ ಬರಬಹುದು. ರಾಜಕಾರಣ ನಿಂತ ನೀರಲ್ಲ, ಅದು ಹರಿಯುವ ನದಿ ಇದ್ದಂತೆ. ರಾಜಕಾರಣದಲ್ಲಿ ಶಾಶ್ವತ ಶತ್ರುಗಳು ಇಲ್ಲ, ಮಿತ್ರರು ಇಲ್ಲ ಎಂದರು.

ಯಾರು ಬೇಕಾದರೂ ಬರಬಹುದು

ರಾಷ್ಟ್ರದ ಹಿತಾಸಕ್ತಿ, ಮೋದಿ ನೇತೃತ್ವದ ರಾಷ್ಟ್ರಹಿತ ಹಾಗೂ ಜನಪರ ಕೆಲಸ ಮೆಚ್ಚಿ ಯಾರು ಬೇಕಾದರೂ ಬರಬಹುದು. ಎನ್ ಡಿಎ ಹಾಗೂ ಬಿಜೆಪಿ ಜೊತೆ ಯಾರು ಬೇಕಾದರೂ ಬರಬಹುದು. ಜೆಡಿಎಸ್ ಜೊತೆ ಮೈತ್ರಿ ಕುರಿತಂತೆ ನಮ್ಮ ಹಂತದಲ್ಲಿ ಯಾವುದೇ ಚರ್ಚೆ ಆಗಿಲ್ಲ. ಮೇಲ್ಮಟ್ಟದಲ್ಲಿ ಆಗಿದ್ದರೆ ಅದರ ಬಗ್ಗೆ ನನಗೆ ಗೊತ್ತಿಲ್ಲ. ನಾವು ಯಾರನ್ನು ದೂರ ಇಟ್ಟು ರಾಜಕಾರಣ ಮಾಡುವ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟವರಲ್ಲ ಎಂದು ಹೇಳಿದರು.

Exit mobile version