ಬೆಂಗಳೂರು : ಬಜೆಟ್ ನಲ್ಲಿ ಅಲ್ಪಸಂಖ್ಯಾತರಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ಕೊಟ್ಟರು.
ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತರಿಗೆ ಹೆಚ್ಚಿನ ಆದ್ಯತೆ ನೀಡಿದ್ರೆ ತಪ್ಪೇನಿದೆ. ಅವರೇನು ನಾಗರಿಕರರಲ್ವಾ? ಬಲಹಿನರಿಗೆ ಶಕ್ತಿ ಕೊಡುವಂತಹ ಬಜೆಟ್ ಇದು ಎಂದು ಕುಟುಕಿದರು.
ಈ ಬಾರಿಯ ಬಜೆಟ್ ರಾಜ್ಯದ ಆರ್ಥಿಕ ಪ್ರಗತಿಗೆ ದಾರಿ ದೀಪವಾಗಲಿದೆ. ಬಸವಣ್ಣನವರ ತತ್ವದಂತೆ ಸರ್ವರಿಗೂ ಸಮಪಾಲು ಇದೆ. ಎಲ್ಲರನ್ನೂ ಸಮಾಜದ ಮುಖ್ಯವಾಹಿನಿಗೆ ತರುವ ಬಜೆಟ್ ಇದಾಗಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಬಜೆಟ್ ನಲ್ಲಿ ಒತ್ತು ನೀಡಲಾಗಿದೆ ಎಂದರು.
ಇದನ್ನೂ ಓದಿ : ಅಲ್ಪಸಂಖ್ಯಾತರಿಲ್ಲದೆ ಕಾಂಗ್ರೆಸ್ಸಿಗರಿಗೆ ಉಸಿರಾಡಲೂ ಸಾಧ್ಯವಿಲ್ಲ : ಸುನಿಲ್ ಕುಮಾರ್
ಬೋಗಸ್ ಬಜೆಟ್ ಅಂತಿದ್ದಾರೆ
ಬಜೆಟ್ ಇನ್ನೂ ಅನುಷ್ಠಾನ ಆಗಿಲ್ಲ, ಆಗಲೇ ಬೋಗಸ್ ಬಜೆಟ್ ಅಂತ ಬಿಜೆಪಿಯವರು ಹೇಳುತ್ತಿದ್ದಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಬಜೆಟ್ ತಲುಪುತ್ತಿದೆ. ವಿಶ್ಲೇಷಣೆಗಿಂತ ತಮ್ಮ ಪಕ್ಷದ ಚಟುವಟಿಕೆಗಳ ಬಗ್ಗೆ ಗಮನ ನೀಡಿ. ಬಜೆಟ್ ನಡೆಯುತ್ತಿದೆ, ವಿರೋಧ ಪಕ್ಷದ ನಾಯಕರ ಆಯ್ಕೆ ಆಗಿಲ್ಲ ಎಂದು ಚಾಟಿ ಬೀಸಿದರು.
ಬಿಜೆಪಿಯವರು ವಲಯವಾರು ಅನುದಾನ ನೀಡ್ತಿದ್ರು, ನಾವು ಇಲಾಖೆವಾರು ಅನುದಾನ ನೀಡಿದ್ದೇವೆ. ಜಲಜೀವನ್ ಮಿಷನ್ ನಲ್ಲಿ ಕನ್ನಡಿಗರ ದುಡ್ಡು ಇದೆ. ಥರ್ಡ್ ಪಾರ್ಟಿ ಆಡಿಟಿಂಗ್ ಗೆ ಸಿದ್ದವಿದ್ದೇವೆ. ಐಟಿ, ಗ್ರಾಮೀಣಾಭಿವೃದ್ಧಿ, ಆರೋಗ್ಯ, ಶಿಕ್ಷಣ ಎಲ್ಲಾ ಇಲಾಖೆಗಳಿಗೆ ಯೋಜನೆ ಇದೆ ಎಂದು ಹೇಳಿದರು.


