Site icon PowerTV

ವಿದ್ಯುತ್ ದರ ಏರಿಕೆ ಖಂಡಿಸಿ ಹುಬ್ಬಳ್ಳಿ ಧಾರವಾಡದಲ್ಲಿ ಸಿಡಿದೆದ್ದ ವ್ಯಾಪಾರಿಗಳು

ಹುಬ್ಬಳ್ಳಿ \ ಧಾರವಾಡ: ರಾಜ್ಯ ಸರ್ಕಾರದ ಗ್ಯಾರಂಟಿ ಜನಜೀವನಕ್ಕೆ ವಾರೆಂಟಿ ಸಿಕ್ಕಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ವಾಣಿಜ್ಯೋದ್ಯಮಗಳಿಗೆ ದೊಡ್ಡಮಟ್ಟದ ಹೊಡೆತವಂತೂ ಬಿದ್ದಿದೆ.ವಿದ್ಯುತ್ ದರ ಏರಿಕೆ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ವಾಣಿಜ್ಯೋದ್ಯಮ ಸಂಸ್ಥೆಗಳು ನಗರದಲ್ಲಿ ಇಂದು ವ್ಯಾಪರ ವಹಿವಾಟು ಬಂದ್ ಮಾಡಿ ಪ್ರತಿಭಟನೆ ಮಾಡಿದರು.

ಹೌದು, ವಿದ್ಯುತ್ ದರ ಏರಿಕೆ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿರುವುದು ಒಂದು ಕಡೆಯಾದರೇ ಮತ್ತೊಂದು ಕಡೆಯಲ್ಲಿ ವಾಣಿಜ್ಯೋದ್ಯಮಗಳಿಗೆ ಆರ್ಥಿಕ ಸಂಕಷ್ಟ ತಂದೊಡ್ಡಿದೆ. ಈ ನಿಟ್ಟಿನಲ್ಲಿ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮುಂದಾಗಿದೆ.

ವಿದ್ಯುತ್‌ ದರದಲ್ಲಿ ಅಸಹಜ ಏರಿಕೆ ವಿರೋಧಿಸಿ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯು (ಕೆಸಿಸಿಐ) ಇತರೆ ಎಲ್ಲಾ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಹಾಗೂ ಸಂಘ- ಸಂಸ್ಥೆಗಳ ಜೊತೆಗೂಡಿ ರಾಜ್ಯದಾದ್ಯಂತ ಒಂದು ದಿನದ ಬಂದ್‍ಗೆ ಕರೆ ನೀಡಿದ್ದು ಈ ಒಂದು ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಬೃಹತ್ ಪ್ರಮಾಣದಲ್ಲಿ ಪ್ರತಿಭಟನೆ ಮಾಡಲಾಯಿತು ಎಲ್ಲಾ ಉದ್ಯಮಿಗಳು, ವ್ಯಾಪಾರಸ್ಥರು ವ್ಯಾಪಾರ ವಹಿವಾಟು ಬಂದ್ ಮಾಡಿ ನಗರದಲ್ಲಿ ಬೃಹತ್ ಪ್ರಮಾಣದಲ್ಲಿ ವಿದ್ಯುತ್ ದರ ಹೆಚ್ಚಳದ ವಿರುದ್ಧ ಹೋರಾಟ ಮಾಡಿದರು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಆಶ್ರಯದಲ್ಲಿ 25 ಕ್ಕೂ ಹೆಚ್ಚು ಸಂಸ್ಥೆ ಗಳು ಬೀದಿಗಿಳಿದು ಹೋರಾಟ ಮಾಡಿದರು.

ಇದನ್ನೂ ಓದಿ: ಸರ್ಕಾರಿ ಕಾರಿನಲ್ಲೇ ಸಕ್ಕರೆ ಸಚಿವರ ಅಕ್ಕರೆಯ ಮಗಳ ಸಂಚಾರ

ನಗರದ ವಾಣಿಜ್ಯೋದ್ಯಮ ಸಂಸ್ಥೆ ಯಿಂದ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ರಾಲಿ ಸಾಗೀತು. ಕರ್ನಾಟಕ ಬಂದ್ ಗೆ ಜಿಲ್ಲೆಯ ಸಂಸ್ಥೆಗಳು ಹಾಗೂ ವಿವಿಧ ವಾಣಿಜ್ಯ ಚಟುವಟಿಕೆಗಳ ಮುಖ್ಯಸ್ಥರು ಬೆಂಬಲ ಸೂಚಿಸಿ ಶಾಂತಿಯುತ ರೀತಿಯಲ್ಲಿ ಬಂದ್ ಮಾಡಿ ವಿದ್ಯುತ್ ದರ ಹೆಚ್ಚಳದ ವಿರುದ್ಧ ತಮ್ಮ ಆಕ್ರೋಶ ವನ್ನು ವ್ಯಕ್ತಪಡಿಸಿದರು.

ಇನ್ನೂ ವಿದ್ಯುತ್ ಶುಲ್ಕ ಹೆಚ್ಚಳದಿಂದ ವ್ಯಾಪಾರಸ್ಥರು, ಜನಸಾಮಾನ್ಯರು ಮತ್ತು ಕೈಗಾರಿಕೆಗಳ ಮೇಲೆ ಆಗಿರುವ ದುಷ್ಪರಿಣಾಮ ಕುರಿತು ಸರ್ಕಾರಕ್ಕೆ ತಿಳಿಸುವ ಪ್ರಯತ್ನವನ್ನು 8 ದಿನಗಳಿಂದ ಮಾಡಿದ್ದೇವೆ. ಆದರೆ ಅಧಿಕಾರಿಗಳು ಮತ್ತು ಸರ್ಕಾರದ ಪ್ರತಿನಿಧಿಗಳಿಂದ ಸ್ಪಂದನೆ ಸಿಕ್ಕಿಲ್ಲ. ಅದಕ್ಕೆ ಅನಿವಾರ್ಯವಾಗಿ ಬಂದ್‌ಗೆ ಕರೆ ನೀಡಿದ್ದೇವೆ ಎಂದು ವ್ಯಾಪಾರಿಗಳು ಹೇಳಿದ್ದು ಕಂಡು ಬಂದಿತು‌‌.

ಕೈಯಲ್ಲಿ ಸೀಮೆ ಎಣ್ಣೆ ಲಾಟೀನು ಹಿಡಿದು ವಿಭಿನ್ನವಾಗಿ ಪ್ರತಿಭಟನೆ ಮಾಡಿದರು. ಉದ್ಯಮ, ವ್ಯಾಪಾರ, ವಹಿವಾಟು ಸಂಪೂರ್ಣ ಬಂದ್ ಮಾಡಿ ಬೃಹತ್ ಪ್ರಮಾಣದ ಪ್ರತಿಭಟನೆ ಜೊತೆಗೆ ಏಳು ದಿನಗಳ ಗಡುವು ನೀಡಿದರೂ ರಾಜ್ಯ ಸರ್ಕಾರ,ವಿದ್ಯುತ್‌ ಸರಬರಾಜು ಕಂಪನಿಗಳು ಸ್ಪಂದಿಸಿಲ್ಲ.

24 ಜಿಲ್ಲೆಗಳ ವಾಣಿಜ್ಯೋದ್ಯಮ ಸಂಸ್ಥೆಗಳು, ಸಂಘ ಸಂಸ್ಥೆಗಳು ಹಾಗೂ ಕೈಗಾರಿಕೆ ಉದ್ಯಮಿಗಳೊಂದಿಗೆ ಚರ್ಚಿಸಿ ತೀರ್ಮಾನ ಮಾಡಲಾಗಿದೆ.ಸರ್ಕಾರ ಹಾಗೂ ಕೆಇಆರ್‌ಸಿ ವಿದ್ಯುತ್ ದರ ಏರಿಕೆ ಹಿಂಪಡೆಯಬೇಕು. ಈ ನಿಟ್ಟಿನಲ್ಲಿ ಶಾಂತಿಯುತ ಪ್ರತಿಭಟನೆಯ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿ ಏಳು ದಿನಗಳ ಗಡುವನ್ನು ಪ್ರತಿಭಟನಾಕಾರರು ನೀಡಿದ್ದಾರೆ.

ಒಟ್ಟಿನಲ್ಲಿ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯು ಸರ್ಕಾರ ಹಾಗೂ ಕೆ.ಇ.ಆರ್.ಸಿಗೆ ಬಿಸಿ ಸಾಂಕೇತಿಕ ಪ್ರತಿಭಟನೆ ಮೂಲಕ ಬಿಸಿ ಮುಟ್ಟಿಸಿದ್ದು ಈ ಒಂದು ಸಾಂಕೇತಿಕ ಹೋರಾಟಕ್ಕೆ ಸ್ಪಂದಿಸದಿದ್ದರೆ ಬರುವ ದಿನಗಳಲ್ಲಿ ತುರ್ತು ಸೇವೆ ಹೊರತುಪಡಿಸಿ ಬಹುತೇಕ ಬಂದ್ ಇರಲಿದೆ ಎಂಬ ಎಚ್ಚರಿಕೆ ಸಂದೇಶವನ್ನು ನೀಡಿದ್ದಾರೆ.

Exit mobile version