ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಅರೇಬಿಕ್ ಕಾಲೇಜಿಗೆ ಭೇಟಿ ನೀಡಿ ಮುಸ್ಲಿಂ ಸಮುದಾಯದ ಗುರುಗಳು ಹಾಗೂ ಮುಖಂಡರ ಜೊತೆ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಸಚಿವರಾದ ಕೆ.ಜೆ. ಜಾರ್ಜ್, ಬಿ.ಝಡ್ ಜಮೀರ್ ಅಹಮದ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮದ್, ರಿಜ್ವಾನ್ ಅರ್ಷದ್ ಸೇರಿದಂತೆ ಪಕ್ಷದ ಹಲವು ಶಾಸಕರು ಉಪಸ್ಥಿತರಿದ್ದರು.

ಬಳಿಕ, ಸಿಎಂ ಸಿದ್ದರಾಮಯ್ಯ ಅವರು ಮಿಲ್ಲರ್ಸ್ ರಸ್ತೆಯಲ್ಲಿರುವ ಕ್ರಿಶ್ಚಿಯನ್ ಧರ್ಮಗುರು ಡಾ.ಪೀಟರ್ ಮಚಾಡೋ ಅವರನ್ನು ಭೇಟಿಯಾದರು. ಈ ವೇಳೆ ಸಿಎಂಗೆ ಹೂಗುಚ್ಛ ನೀಡಿ ಧರ್ಮಗುರು ಡಾ. ಪೀಟರ್ ಮಚಾಡೋ ಶುಭಕೋರಿದರು. ಹೋಲಿ ಬೈಬಲ್ ಮತ್ತು ಕ್ರಿಸ್ತನ ಫೋಟೋ ನೀಡಿ ಸ್ವಾಗತ ಕೋರಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿರುವ ಸಚಿವ ಕೆ.ಜೆ ಜಾರ್ಜ್ ಅವರು, ನಮ್ಮ ಮುಖ್ಯಮಂತ್ರಿಗಳು ಇಂದು ಬಿಷಪ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಬೇರೇನೂ ಚರ್ಚೆ ಮಾಡಿಲ್ಲ. ಸುತ್ತೂರು ಶ್ರೀಗಳು ಸೇರಿದಂತೆ ಎಲ್ಲಾ ಧರ್ಮದ ಗುರುಗಳನ್ನು ಭೇಟಿಯಾಗಿದ್ದಾರೆ. ಅದರಂತೆ ಇಂದು ಮುಸ್ಲಿಂ ಧರ್ಮಗುರುಗಳು ಹಾಗೂ ಕ್ರಿಶ್ಚಿಯನ್ ಧರ್ಮಗುರುಗಳನ್ನು ಭೇಟಿಯಾಗಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ : ಈ ಕ್ಷಣ ನಿಜ ಹಿಂದೂಗಳ ರಕ್ಷಣೆಗೆ ಕಾಂಗ್ರೆಸ್ ಸದಾ ಬದ್ಧ : ಸಚಿವ ರಾಮಲಿಂಗಾರೆಡ್ಡಿ

ಮಧುರೈನ ಮಕ್ಕಳ್ ಸಮುಗನೀತಿ ಪೆರವೈ ಸಂಸ್ಥೆಯ ಸಂಘಟಕರಾದ ಆರ್. ಮನೋಹರನ್ ಅವರ ನೇತತ್ವದ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ವಿವಿಧ ವಿಷಯಗಳ ಕುರಿತು ಚರ್ಚಿಸಿದರು. ಮಾಜಿ ಸಚಿವರಾದ ಹೆಚ್.ಎಂ ರೇವಣ್ಣ, ಸಂಸ್ಥೆಯ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಧಾರವಾಡದ ಶ್ರೀ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಮಾಡಿದರು. ಈ ಸಂದರ್ಭದಲ್ಲಿ ಸವಣೂರು ದೊಡ್ಡ ಹುಣಸೆ ಕಲ್ಮಠದ ಶ್ರೀ ಚನ್ನಬಸವ ಮಹಾಸ್ವಾಮೀಜಿ, ಹುಮ್ನಾಬಾದ್ ಹುಡಗಿ ಗ್ರಾಮದ ಶ್ರೀ ಚೆನ್ನಮಲ್ಲ ಸ್ವಾಮೀಜಿ, ವಿಜಯಪುರದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಶಾಸಕರಾದ ವಿನಯ ಕುಲಕರ್ಣಿ, ಕೋನರೆಡ್ಡಿ ಉಪಸ್ಥಿತರಿದ್ದರು.



