Site icon PowerTV

ಸಿದ್ದರಾಮಯ್ಯ ಕಾಲ್ಗುಣದಿಂದ ಮುಂಗಾರು ಓಡಿಹೋಯಿತೇ? : ಬಿಜೆಪಿ ಲೇವಡಿ

ಬೆಂಗಳೂರು : ಈ ಬಾರಿಯ ರಾಜ್ಯದಲ್ಲಿ ಮುಂಗಾರು ಪ್ರವೇಶ ವಿಳಂಬವಾಗುವ ಸಾಧ್ಯತೆಯಿದೆ. ಇದನ್ನೇ ಅಸ್ತ್ರವನ್ನಾಗಿ ಬಳಿಸಿಕೊಂಡಿರುವ ರಾಜ್ಯ ಬಿಜೆಪಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಲೆಳೆದಿದೆ.

ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ‘ಸಿದ್ದು’ಕಾಲವೆಂದರೆ ಬರಗಾಲವೆಂಬ ನುಡಿ ಸತ್ಯವಾಯಿತೇ? ಮುಂಗಾರು ಓಡಿಹೋಯಿತೇ? ಎಂದು ಲೇವಡಿ ಮಾಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಘಟಪ್ರಭಾ ಹಾಗೂ ಮಲಪ್ರಭಾ ಬರಿದಾಯ್ತು. ತಾವು ಮಾತ್ರ ಮೌನ(?). ರಾಜ್ಯದ ಜೀವನಾಡಿ ಕೆಆರ್‌ಎಸ್ ಬತ್ತಿ ಹೋಗುತ್ತಿದೆ. ಆದರೂ, ತಾವು ಮಾತ್ರ ಮೌನ. ಬೆಂಗಳೂರಿಗೆ ಜಲಕಂಟಕ ಶುರುವಾಗಿದೆ. ತಾವು ಮಾತ್ರ ಮೌನ ಎಂದು ಮೌನವನ್ನು ಸೂಚಿಸುವ ‘ಎಮೋಜಿ’ ಬಳಸಿ ಛೇಡಿಸಿದೆ.

ಇದನ್ನೂ ಓದಿ : ಕರಾವಳಿ ಭಾಗದಲ್ಲಿ 3 ದಿನ ವರುಣಾರ್ಭಟ, ಯೆಲ್ಲೋ ಅಲರ್ಟ್ ಘೋಷಣೆ

ಉಡುಪಿ ಹಾಗೂ ಮಂಗಳೂರಲ್ಲಿ ನೀರಿಲ್ಲ. ಶಾಲಾ-ಕಾಲೇಜು, ಹೋಟೆಲ್‌ಗಳು ಬಂದ್! ತಾವು ಮಾತ್ರ ಮೌನ. ಸಿಗಂದೂರಿನ ಹಿನ್ನೀರು ಸಂಪೂರ್ಣ ಖಾಲಿ. ತಾವು ಮಾತ್ರ ಮೌನ. ಕೃಷ್ಣ, ತುಂಗೆಯೂ ಬರಿದು. ತಾವು ಮಾತ್ರ ಮೌನ. ನಾರಾಯಣಪುರ ಬಲದಂಡೆ ತಳಕಂಡಿದೆ. ಆದರೂ, ತಾವು ಮಾತ್ರ ಮೌನ ಎಂದು ಕುಟುಕಿದೆ.

ಸಿದ್ದರಾಮಯ್ಯನವರೇ, ನಿಮ್ಮ ‘ಕ್ಷಾಮ’ ಪಕ್ಷದ ಕಾಲ್ಗುಣದಿಂದ ಉಂಟಾದ ಈ ಘನಘೋರ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತೀರಿ? ಹೇಗೆ ‘ಸಿದ್ದ’ ರಾಗಿದ್ದೀರಿ? ಕಾಗೆ ಹಾರಿಸದೆ, ರಾಜ್ಯದ ಜನರಿಗೆ ಉತ್ತರ ಕೊಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಟೀಕಿಸಿದೆ.

Exit mobile version