ತುಮಕೂರು : ಚುನಾವಣಾ ಪ್ರಚಾರದ ವೇಳೆ ಮಾಜಿ ಉಪಮುಖ್ಯಮಂತ್ರಿ ಹಾಗೂ ಕೊರಟಗೆರೆ ಕಾಂಗ್ರೆಸ್ ಅಭ್ಯರ್ಥಿ ಡಾ. ಜಿ. ಪರಮೇಶ್ವರ್ ತಲೆಗೆ ಕಲ್ಲೇಟು ಬಿದ್ದು ಗಾಯವಾದ ಘಟನೆ ನಡೆದಿದೆ.
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಭೈರೇನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಚುನಾವಣೆ ಪ್ರಚಾರಕ್ಕೆ ತೆರಳಿದ್ದ ವೇಳೆಯಲ್ಲಿ ಘಟನೆ ನಡೆದಿದೆ.
ಕಲ್ಲೇಟು ಬಿದ್ದು ಕಾಂಗ್ರೆಸ್ ಅಭ್ಯರ್ಥಿ ಪರಮೇಶ್ವರ್ ಅವರ ತಲೆಗೆ ಗಾಯವಾಗಿ ರಕ್ತ ಸೋರಿಕೆಯಾಗಿದೆ. ಪರಮೇಶ್ವರ್ ಅವರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಇದನ್ನೂ ಓದಿ : ನಾನು ಪ್ರಧಾನಿ ಮೋದಿಗೆ ‘ವಿಷದ ಹಾವು’ ಎಂದಿಲ್ಲ : ಉಲ್ಟಾ ಹೊಡೆದ ಖರ್ಗೆ
ಪರಮೇಶ್ವರ್ ಅವರನ್ನು ಕಾರ್ಯಕರ್ತರು ಎತ್ತಿಕೊಂಡು ಕುಣಿಯುತ್ತಿದ್ದ ಸಂದರ್ಭದಲ್ಲಿ ಹೂವು ಎಸೆಯಲಾಗಿದೆ. ಈ ವೇಳೆ ಗುಂಪಿನಲ್ಲಿದ್ದ ದುಷ್ಕರ್ಮಿ ಕಲ್ಲೆಸೆದಿದ್ದಾನೆ. ಕಲ್ಲು ಬಿದ್ದ ಕೂಡಲೇ ಪರಮೇಶ್ವರ ತಲೆ ಹಿಡಿದುಕೊಂಡಿದ್ದಾರೆ. ತಲೆಗೆ ಪೆಟ್ಟು ಬಿದ್ದು ಗಾಯವಾಗಿ ರಕ್ತ ಸೋರಿಕೆಯಾಗಿದ್ದು, ಅವರನ್ನು ಅಕ್ಕಿರಾಂಪುರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ಆರೋಪಿ ರಂಗಧಾಮಯ್ಯ ಬಂಧನ
ಕೊರಟಗೆರೆ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದರು. ಇದೀಗ, ಕಲ್ಲು ತೂರಿದ ಆರೋಪಿಯನ್ನು ರಂಗಧಾಮಯ್ಯ ಎಂದು ಗುರುತಿಸಲಾಗಿದ್ದು, ಪೊಲೀಸರು ಬಂಧಿಸಿದ್ದಾರೆ. ಆರೋಪಿ ರೆಡ್ಡಿಹಳ್ಳಿ ವೆಂಕಟಾಪುರ ಗ್ರಾಮದವನು ಎಂದು ಗುರುತಿಸಲಾಗಿದೆ.
ಈ ಹಿಂದೆ ಪರಮೇಶ್ವರ್ ಅವರು ನಾಮಪತ್ರ ಸಲ್ಲಿಸುವ ವೇಳೆ ಕಲ್ಲು ಎಸೆದ ಘಟನೆ ನಡೆದಿತ್ತು. ಆ ವೇಳೆ ಮಹಿಳಾ ಪೊಲೀಸ್ ಪೇದೆಗೆ ಕಲ್ಲು ಬಿದ್ದು ಅವರು ಗಾಯಗೊಂಡಿದ್ದರು.



