Site icon PowerTV

ಬಿಜೆಪಿ ಪಟ್ಟಿ ‘ಕೈ’ ನಾಯಕರ ಎದೆ ನಡುಗಿಸಿದೆ : ಈಶ್ವರಪ್ಪ

ಬೆಂಗಳೂರು : ಕಾಂಗ್ರೆಸ್ ನಾಯಕರ ಎದೆ ನಡುಗಿಸುವಂತಹ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರು ಅಳೆದು ತೂಗಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಹಾಗಾಗಿ, ಚುನಾವಣೆಯಲ್ಲಿ ರಾಜ್ಯದ ಜನರ ಮನಸ್ಸನ್ನು ಗೆದ್ದು ಪೂರ್ಣ ಬಹುಮತದಿಂದ ಬಿಜೆಪಿ ಆಯ್ಕೆಯಾಗಲಿದೆ ಎಂದು ತಿಳಿಸಿದ್ದಾರೆ.

ಬಿಡುಗಡೆಯಾದ ಪಟ್ಟಿಯಿಂದ ಬಹಳ ಖುಷಿಯಾಗಿದೆ. ಕರ್ನಾಟಕದಲ್ಲಿ ಈವರೆಗೂ ಬಿಜೆಪಿಗೆ ಪೂರ್ಣ ಬಹುಮತ ಬಂದಿಲ್ಲ. ಬಿಜೆಪಿ ಆಡಳಿತ ಮಾಡಲಿ ಎಂದು ಜನ ಆದೇಶ ಕೊಟ್ಟಿದ್ದರು. ಈ ಬಾರಿ ಆದೇಶದೊಂದಿಗೆ ಪೂರ್ಣ ಬಹುಮತವನ್ನು ಕೊಡಿ ಎಂದು ಮನವಿ ಮಾಡುತ್ತೇನೆ ಎಂದು ಈಶ್ವರಪ್ಪ ಹೇಳಿದ್ದಾರೆ.

ಇದನ್ನೂ ಓದಿ : ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ‘ಈಶ್ವರಪ್ಪ ಕೇವಲ ಆರೋಪಿ’ : ರೇಣುಕಾಚಾರ್ಯ

ಬಿಜೆಪಿ ನಿಂತ ನೀರಲ್ಲ. ಇಲ್ಲಿ ಹೊಸ ಅಭ್ಯರ್ಥಿಗಳು ಬರುತ್ತಾರೆ. ಜೊತೆಗೆ ಹಳಬರು ಇರುತ್ತಾರೆ. ಎಲ್ಲರಿಗೂ ಅನುಕೂಲವಾಗುವಂತಹ ಪಟ್ಟಿ ಬಿಡುಗಡೆ ಆಗಿದೆ. ಹಿಂದುಳಿದ ವರ್ಗದವರಿಗೆ ಹೆಚ್ಚಿನ ಆದ್ಯತೆ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಬಿಜೆಪಿ ಪಟ್ಟಿಯಲ್ಲಿ ವೈದ್ಯರು, ನಿವೃತ್ತ ಐಎಎಸ್ ಅಧಿಕಾರಿ ಹಾಗೂ ನಿವೃತ್ತ ಸರ್ಕಾರಿ ನೌಕರರು ಇದ್ದಾರೆ. ಮಹಿಳೆಯರಿಗೆ ಹಾಗೂ ಸಮಾಜ ಸೇವಕರಿಗೂ ಈ ಬಾರಿ ಟಿಕೆಟ್ ನೀಡಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

Exit mobile version