Site icon PowerTV

‘ಪೊಳ್ಳು, ಸುಳ್ಳು ಗ್ಯಾರೆಂಟಿ’ ಪ್ರಣಾಳಿಕೆ ನಮ್ಮದಲ್ಲ : ‘ಕೈ’ ನಾಯಕರಿಗೆ ಸುಧಾಕರ್ ಟಾಂಗ್

ಬೆಂಗಳೂರು : ರಾಮರಾಜ್ಯದ ಕನಸಿಗೆ ಪೂರಕ ಪ್ರಣಾಳಿಕೆ ಸಿದ್ಧವಾಗಲಿದೆ. ಪೊಳ್ಳು ಭರವಸೆ, ಸುಳ್ಳು ಗ್ಯಾರೆಂಟಿಯ ಪ್ರಣಾಳಿಕೆ ನಮ್ಮದಲ್ಲ ಎನ್ನುವ ಮೂಲಕ ಕಾಂಗ್ರೆಸ್ ನಾಯಕರಿಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್‌ ಟಾಂಗ್ ಕೊಟ್ಟಿದ್ದಾರೆ.

ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಪ್ರಣಾಳಿಕೆ ಅಭಿಯಾನ ಸಲಹಾ ಸಮಿತಿ ಸಭೆಯ ಬಳಿಕ ಮಾತನಾಡಿದ ಅವರು, ಬಿಜೆಪಿಯ ಪ್ರಣಾಳಿಕೆ ರಾಮರಾಜ್ಯದ ಪರಿಕಲ್ಪನೆಯಲ್ಲಿ ಇರಲಿದ್ದು, ರಾಜ್ಯದ ಆರ್ಥಿಕ ಸ್ಥಿತಿ ಮತ್ತು ಶಕ್ತಿಯನ್ನು ಆಧರಿಸಿ ಅಭಿವೃದ್ಧಿಗೆ ಪೂರಕವಾಗಿರಲಿದೆ ಎಂದು ಹೇಳಿದ್ದಾರೆ.

ಪ್ರತಿ ಜಿಲ್ಲೆ, ತಾಲೂಕುಗಳಲ್ಲಿ ಸಲಹಾ ಪೆಟ್ಟಿಗೆಗಳನ್ನು ಇಡಲಾಗಿತ್ತು. ಅದೆಲ್ಲವನ್ನೂ ತರಿಸಿಕೊಂಡು ತಾಲೂಕುವಾರು, ಜಿಲ್ಲಾವಾರು ಸಲಹೆಗಳನ್ನು ತೆಗೆದುಕೊಂಡು ಡಿಜಿಟಲೈಸ್‌ ಮಾಡಲಾಗಿದೆ. ಪ್ರತಿಯೊಂದು ವರ್ಗದ ಜನರ ಅಭಿವೃದ್ಧಿಗೆ ಏನು ಮಾಡಬಹುದು ಅನ್ನುವುದನ್ನು ಚರ್ಚಿಸಿ ಪ್ರಣಾಳಿಕೆ ಸಿದ್ಧವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಬಿಜೆಪಿಯ 25 ಶಾಸಕರು, ಸಚಿವರಿಗೆ ಟಿಕೆಟ್ ಮಿಸ್ : ಲೀಸ್ಟ್ ನಲ್ಲಿ ಯಾರೆಲ್ಲ ಇದ್ದಾರೆ ಗೊತ್ತಾ?

ವಾರದ ಒಳಗೆ ಪ್ರಣಾಳಿಕೆ ಬಿಡುಗಡೆ

ಬಿಜೆಪಿಯ ಪ್ರಣಾಳಿಕೆ ಕೇವಲ ಘೋಷಣೆಗೆ ಸೀಮಿತವಾಗದೆ 5 ವರ್ಷಗಳಲ್ಲಿ ನಮ್ಮ ಸರ್ಕಾರ ಮಾಡಬೇಕಾಗಿರುವ, ಮಾಡಬಹುದಾದ ಅಭಿವೃದ್ಧಿಯ ಬ್ಲೂ ಪ್ರಿಂಟ್‌ ಆಗಲಿರಲಿದೆ. ಮುಂದಿನ 7 ದಿನಗಳ ಒಳಗೆ ಪ್ರಣಾಳಿಕೆ ಬಿಡುಗಡೆಯಾಗಲಿದೆ. ಗ್ರೇಟರ್‌ ಬೆಂಗಳೂರು, ಕರಾವಳಿ ಪ್ರದೇಶ, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ, ಹಳೆ ಮೈಸೂರು ಹೀಗೆ ವಲಯವಾರು, ಜಿಲ್ಲಾವಾರು ಪ್ರಣಾಳಿಕೆ ಮಾಡಲು ಅವಕಾಶವಿದೆ ಎಂದು ತಿಳಿಸಿದ್ದಾರೆ.

ಪ್ರಣಾಳಿಕೆ ಸಮಿತಿಯಲ್ಲಿ 32 ಎಕ್ಸ್‌ಪರ್ಟ್‌ಗಳು

ಪ್ರಣಾಳಿಕೆ ಸಮಿತಿಯಲ್ಲಿ ವಿಷಯವಾರು ತಜ್ಞರು ಸೇರಿದಂತೆ 32 ಎಕ್ಸ್‌ಪರ್ಟ್‌ಗಳಿದ್ದಾರೆ. ಇವರ ಜೊತೆ ಸಮಾಲೋಚನೆ ನಡೆಸಿ, ಕರ್ನಾಟಕದ ಪ್ರಣಾಳಿಕೆ ಇಡೀ ದೇಶಕ್ಕೆ ಮಾದರಿಯಾಗಿ, ಸಮಗ್ರವಾಗಿರಲಿದೆ. ಹೊಸತನ ಮತ್ತು ಬದುಕು ಕಟ್ಟಿಕೊಡುವ, ನೈಜತೆಯಿಂದ ಕೂಡಿರುವ ಪ್ರಣಾಳಿಕೆ ಇದಾಗಿರಲಿದೆ ಎಂದು ಸುಧಾಕರ್ ತಿಳಿಸಿದ್ದಾರೆ.

Exit mobile version