Site icon PowerTV

ಅಲ್ಲಿ.. ‘ದೇವೇಗೌಡ್ರು ಫ್ಯಾಮಿಲಿ’ ಮಾತು ಕೇಳ್ಕೊಂಡು ಬಿದ್ದಿರಬೇಕು : ಸಿದ್ದರಾಮಯ್ಯ ಗುಡುಗು

ಬೆಂಗಳೂರು : ದೇವೇಗೌಡ್ರು ಕುಟುಂಬ ಏನು ಹೇಳುತ್ತೆ ಅದನ್ನು ಕೇಳ್ಕೊಂಡು ಬಿದ್ದಿರಬೇಕು. ಅದನ್ನು ಪ್ರಶ್ನೆ ಮಾಡಿದ್ರೆ ಆ ಪಕ್ಷದಲ್ಲಿ ಯಾರೂ ಉಳಿಯಲು ಸಾಧ್ಯವಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗುಡುಗಿದ್ದಾರೆ.

ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಹಮ್ಮಿಕೊಂಡಿದ್ದ ಬೃಹತ್ ಸಮಾವೇಶದಲ್ಲಿ ಜೆಡಿಎಸ್ ತ್ಯಜಿಸಿ ಕಾಂಗ್ರೆಸ್ ಸೇರ್ಪಡೆಯಾದ ಶಾಸಕ ಶಿವಲಿಂಗೇಗೌಡರನ್ನು ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡಿದ್ದಾರೆ.

ದೇವೇಗೌಡ್ರು ಕುಟುಂಬ ಹೇಳಿದ್ದನ್ನು ಬಹುಶಃ ಶಿವಲಿಂಗೇಗೌಡ ಪ್ರಶ್ನೆ ಮಾಡಿರಬೇಕು. ಶಿವಲಿಂಗೇಗೌಡ್ರು ಹೇಳಿದ್ರು ನಿಮ್ಮನ್ನು ಹಾಗೂ ಡಿ.ಕೆ ಶಿವಕುಮಾರ್ ಹಾಗೂ ಡಿ.ಕೆ ಸುರೇಶ್ ಅವರನ್ನು ನಂಬಿ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದೇನೆ ಅಂದ್ರು. ಅವರ ಮುಂದಿನ ರಾಜಕೀಯ ಜೀವನ ಉಜ್ವಲವಾಗಿರಲಿ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್ ನಿಂದ 15 ಮಂದಿ JSDಗೆ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ

ಶಿವಲಿಂಗೇಗೌಡ್ರನ್ನು ಹಾಲಿಗೇ ಹಾಕೋದು

ಶಿವಲಿಂಗೇಗೌಡ ನೀರಾಗಾದ್ರೂ ಹಾಕಿ, ಹಾಲಿಗಾದ್ರೂ ಅಂತಾ ಹೇಳಿದ್ರು. ನಮ್ಮದು ಕಾಂಗ್ರೆಸ್ ಪಕ್ಷ, ಶಿವಲಿಂಗೇಗೌಡರನ್ನು ಹಾಲಿಗೇ ಹಾಕೋದು. ಶಿವಲಿಂಗೇಗೌಡ್ರು ಇವತ್ತು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಅವರು ಇವತ್ತಿನಿಂದ ನಮ್ಮ ಕಾಂಗ್ರಸ್ ಪಕ್ಷದ ನಾಯಕರು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ನಾನು ಹಾಗೂ ಡಿ.ಕೆ ಶಿವಕುಮಾರ್ ಇಬ್ಬರೂ ಹೈಕಮಾಂಡ್ ಜೊತೆ ಮಾತಾಡುತ್ತೇವೆ. ಶಿವಲಿಂಗೇಗೌಡ್ರಿಗೆ ಟಿಕೆಟ್ ಕೊಟ್ಟೇ ಕೊಡಿಸುತ್ತೇವೆ. ಅರಸೀಕೆರೆಯಲ್ಲಿ ಶಿವಲಿಂಗೇಗೌಡ್ರನ್ನು ಗೆಲ್ಲಿಸಬೇಕಾದವರು ನೀವು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದಾರೆ.

ನೀರು ಬರೋಕೆ ಶಿವಲಿಂಗೇಗೌಡ್ರೇ ಕಾರಣ

ಶಿವಲಿಂಗೇಗೌಡ್ರು ಒಬ್ಬ ಜನಪರ ಕಾಳಜಿ ಇರುವ, ಕ್ಷೇತ್ರ ಅಭಿವೃದ್ಧಿ ಹೊಂದಬೇಕೆನ್ನುವ ಹಂಬಲ ಇರುವ ವ್ಯಕ್ತಿ. ಮಂತ್ರಿಗಳ ಹತ್ತಿರ, ಅಧಿಕಾರಿಗಳ ಹತ್ತಿರ ಹೇಗೆ ಕೆಲಸ ಮಾಡಬೇಕೆಂಬುದನ್ನು ಚೆನ್ನಾಗಿ ಅರಿತಿದ್ದಾರೆ. ಶಿವಲಿಂಗೇಗೌಡ್ರು ಶಾಸಕರಾಗೋಕೂ ಮುಂಚೆಯಿಂದ ನನಗೆ ಪರಿಚಯಸ್ಥರು. ಅರಸೀಕೆರೆ ತಾಲೂಕಿಗೆ ಕುಡಿಯುವ ನೀರು ಬಂದಿದೆ ಅಂದ್ರೆಅದಕ್ಕೆ ಶಿವಲಿಂಗೇಗೌಡ ಅವರೇ ಕಾರಣ ಎಂದು ಹಾಡಿ ಹೊಗಳಿದ್ದಾರೆ.

ಎತ್ತಿನಹೊಳೆ ಉದ್ಘಾಟನೆಗೆ ಚಿಕ್ಕಬಳ್ಳಾಪುರದಲ್ಲಿ ಕಾರ್ಯಕ್ರಮ ಮಾಡಿದ್ದೆವು. ಅದಕ್ಕೆ ಜೆಡಿಎಸ್ ನ ಎಲ್ಲಾ ಶಾಸಕರು, ಕುಮಾರಸ್ವಾಮಿ ಹಾಗೂ ರೇವಣ್ಣ ಅವರಿಗೂ ಆಹ್ವಾನ ನೀಡಿದ್ದೆವು. ಆದ್ರೆ ಅವರು ಯಾರೂ ಬರಲಿಲ್ಲ. ಎತ್ತಿನಹೊಳೆ ಯೋಜನೆಗೆ ಅರಸೀಕೆರೆ ತಾಲೂಕು ಇರಲಿಲ್ಲ, ಅದನ್ನು ನಾವು ಸೇರಿಸಿದ್ದೆವು. ಅದನ್ನು ಕುಮಾರಸ್ವಾಮಿ ಅವರು ವಿರೋಧ ಮಾಡಿದ್ದರು. ಅದೊಂದು ದುಡ್ಡು ಹೊಡೆಯುವ ಕಾರ್ಯಕ್ರಮ, ಅದರಿಂದ ನೀರು ಬರಲ್ಲ ಅಂದಿದ್ದರು ಎಂದು ಜೆಡಿಎಸ್ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ.

Exit mobile version