Site icon PowerTV

ಮಡಿಲು ದತ್ತು ಕೇಂದ್ರದ ಮಕ್ಕಳ ಸ್ಥಳಾಂತರಕ್ಕೆ ಸಿದ್ಧತೆ

ಚಿತ್ರದುರ್ಗ : ಫೋಕ್ಸೊ ಪ್ರಕರಣದಲ್ಲಿ ಜೈಲು ಪಾಲಾಗಿರೋ ಮುರುಘಾಶ್ರೀಗೆ ಸದ್ಯಕ್ಕಂತೂ ಬಿಡುಗಡೆ ಭಾಗ್ಯವಿಲ್ಲ.. ಡಾ.ಶಿವಮೂರ್ತಿ ಶರಣರ ನ್ಯಾಯಾಂಗ ಬಂಧನ ವಿಸ್ತರಣೆಯಾಗಿದೆ.. ನವೆಂಬರ್ 3ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಕೋರ್ಟ್ ಆದೇಶಿಸಿದೆ. ಮತ್ತೊಂದೆಡೆ ಚಿತ್ರದುರ್ಗ ಮುರುಘಾಮಠದ ಆವರಣದಲ್ಲಿನ ಮಡಿಲು ದತ್ತು ಕೇಂದ್ರದ ಮಕ್ಕಳನ್ನು ಸ್ಥಳಾಂತರಿಸುವುದಕ್ಕೆ ಸಿದ್ಧತೆ ನಡೆದಿದೆ.

ಚಿತ್ರದುರ್ಗ ಮುರುಘಾಮಠದ ದತ್ತು ಕೇಂದ್ರದಲ್ಲಿರುವ ನಾಲ್ವರು ಬಾಲಕಿಯರು, ಐವರು ಬಾಲಕರು ಸೇರಿ 9 ಮಕ್ಕಳನ್ನು ಬೆಂಗಳೂರಿನ ಸರ್ಕಾರಿ ದತ್ತು ಕೇಂದ್ರಕ್ಕೆ ಶಿಫ್ಟ್ ಮಾಡಲು ಸಿದ್ಧತೆ ನಡೆದಿದೆ. ಈ 9 ಮಕ್ಕಳು ಆರು ವರ್ಷದೊಳಗಿರುವವರಾಗಿದ್ದಾರೆ.. ಮಡಿಲು ದತ್ತು ಕೇಂದ್ರದಲ್ಲಿ ಇಬ್ಬರು ಬಾಲಕಿಯರ ಮಾಹಿತಿ ದಾಖಲಿಸದ ಹಿನ್ನೆಲೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.. ನಾಲ್ಕೂವರೆ ವರ್ಷದ ಬಾಲಕಿ ಮತ್ತು 17 ವರ್ಷದ ಬಾಲಕಿ ಮಾಹಿತಿಯನ್ನು ದಾಖಲಿಸಿರಲಿಲ್ಲ.. ಪೊಲೀಸರ ತನಿಖೆ ವೇಳೆ ಬಾಲಕಿಯರು ಪತ್ತೆಯಾಗಿದ್ದರು.. ಹೀಗಾಗಿ ಬಾಲ ನ್ಯಾಯ ಕಾಯ್ದೆ ಉಲ್ಲಂಘನೆ ಬಗ್ಗೆ ದೂರು ದಾಖಲಿಸಿದ್ದು ಸದ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಚಿತ್ರದುರ್ಗದ ದತ್ತು ಕೇಂದ್ರದಲ್ಲಿರುವ ಮಕ್ಕಳನ್ನು ಸ್ಥಳಾಂತರಿಸಲು ಮುಂದಾಗಿದೆ.

ಈಗಾಗಲೇ ಪೋಕ್ಸೋ ಕೇಸ್​ನಲ್ಲಿ ಎ-1 ಮುರುಘಾಶ್ರೀ ಹಾಗೂ ಎ-3 ಮುರುಘಾ ಮಠದ ಹಾಸ್ಟೆಲ್​​ನ ಲೇಡಿ ವಾರ್ಡನ್ ಜೈಲಿನಲ್ಲಿದ್ದಾರೆ.. ಹಾಸ್ಟೆಲ್​​ನಲ್ಲಿ ಅಕ್ರಮವಾಗಿ ಇಬ್ಬರು ಬಾಲಕಿಯರ ಪಾಲನೆ ಮಾಡಲಾಗುತ್ತಿದೆ.. ಮುರುಘಾಶ್ರೀ ವಿರುದ್ಧ ಆಗಸ್ಟ್​ 26ರಂದು ಪೋಕ್ಸೊ ಕೇಸ್ ಹಿನ್ನೆಲೆ ಮಠದ ಹಾಸ್ಟೆಲ್​​​ಗೆ ಅಧಿಕಾರಿಗಳು ಭೇಟಿ ನೀಡಿದ್ದ ವೇಳೆ ಮುರುಘಾಮಠದ ಹಾಸ್ಟೆಲ್‌ನಲ್ಲಿ ಇಬ್ಬರು ಬಾಲಕಿಯರು ಪತ್ತೆಯಾಗಿದ್ದರು.. ಆಗ ಮಠದ ಹಾಸ್ಟೆಲ್​ನಲ್ಲಿದ್ದ ಮಕ್ಕಳನ್ನ ಸರ್ಕಾರಿ ಹಾಸ್ಟೆಲ್, ಬಾಲಮಂದಿರಕ್ಕೆ ಶಿಫ್ಟ್ ಮಾಡಲಾಗಿತ್ತು.. CWC ಗಮನಕ್ಕೆ ತರದೆ ಇಬ್ಬರು ಮಕ್ಕಳ ಪಾಲನೆ ಮಾಡುತ್ತಿರುವ ಆರೋಪ ಹಿನ್ನೆಲೆ CWC ಅಧಿಕಾರಿಗಳು ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಬಾಲ ನ್ಯಾಯ ಕಾಯ್ದೆ ಉಲ್ಲಂಘನೆ‌ ಕೇಸ್ ದಾಖಲಿಸಿದ್ದಾರೆ.

Exit mobile version