Thursday, August 28, 2025
HomeUncategorizedಟಗರು - ಸಲಗ ತಂತ್ರಜ್ಞರ ಸೌಂಡ್​ ಹೆಚ್ಚಿಸಿದ ವಿಜಿ & ಸೂರಿ

ಟಗರು – ಸಲಗ ತಂತ್ರಜ್ಞರ ಸೌಂಡ್​ ಹೆಚ್ಚಿಸಿದ ವಿಜಿ & ಸೂರಿ

ಸುಕ್ಕಾ ಸೂರಿ ಹಾಗೂ ದುನಿಯಾ ವಿಜಯ್ ಗರಡಿಯಲ್ಲಿ ಪಳಗಿರೋ ಅಭಿ ಅನ್ನೋ ಯುವ ನಿರ್ದೇಶಕ ಉತ್ತರ ಕರ್ನಾಟಕ ಫ್ಲೇವರ್​ನಲ್ಲಿ ಹೊಸ ಪ್ರಯೋಗವೊಂದನ್ನ ಮಾಡಿದ್ದಾರೆ. ಅದೇ ಸೋಮು ಸೌಂಡ್ ಇಂಜಿನಿಯರ್. ಅಭಿ ಗುರಿಗೆ ಗುರುಗಳ ಸಾಥ್ ಜೊತೆ ಟಗರು, ಸಲಗ ಟೆಕ್ನಿಷಿಯನ್ಸ್ ಬಲ ಕೂಡ ಸಿಕ್ಕಿದೆ. ಇಷ್ಟಕ್ಕೂ ಟೀಸರ್ ಹೇಗಿದೆ..? ವಿಶೇಷತೆ ಏನು ಅಂತೀರಾ..? ನೀವೇ ಓದಿ.

  • ನೂತನ ಪ್ರಯೋಗ ಈ ‘ಸೋಮು ಸೌಂಡ್ ಇಂಜಿನಿಯರ್’
  • ಅಭಿಗೆ ಕ್ಲಾಸ್ & ಮಾಸ್ ಚಿತ್ರಗಳ ರೈಟರ್ ಮಾಸ್ತಿ ಬೆನ್ನೆಲುಬು

ಕರಾವಳಿ ಮಣ್ಣಿನ ಸೊಗಡು ಮತ್ತು ಸೊಬಗಿನ ಕಾಂತಾರ ಸಿನಿಮಾ, ಸದ್ಯ ಸಖತ್ ಸಂಚಲನ ಮೂಡಿಸಿದೆ. ಇದೀಗ ಅಂಥದ್ದೇ ಮತ್ತೊಂದು ಭೌಗೋಳಿಕ ಪ್ರದೇಶದ ನೆಲದಲ್ಲಿ ವಿಶಿಷ್ಟ ಮತ್ತು ವಿಭಿನ್ನ ಪ್ರಯತ್ನವೊಂದು ಆಗಿದೆ. ಅದೇ ಸೋಮು ಸೌಂಡ್ ಇಂಜಿನಿಯರ್. ಇಡೀ ಚಿತ್ರ ಉತ್ತರ ಕರ್ನಾಟಕದ ನೆಲದಲ್ಲೇ ಕಟ್ಟಿಕೊಟ್ಟಿರೋ ಚಿತ್ರತಂಡ, ಸಂಪೂರ್ಣವಾಗಿ ಆ ಭಾಗದ ಭಾಷೆಯನ್ನೇ ಬಳಸಿದೆ.

ನಿರ್ದೇಶಕ ದುನಿಯಾ ಸೂರಿ ಹಾಗೂ ಸಲಗ ವಿಜಯ್ ಅವ್ರ ಬಳಿ ಸಹಾಯಕ ನಿರ್ದೇಶಕರಾಗಿ ಪಳಗಿದ್ದ ಅಭಿ ಅನ್ನೋ ಉತ್ತರ ಕರ್ನಾಟಕದ ಪ್ರತಿಭೆ, ಈ ಚಿತ್ರದಿಂದ ಸ್ವತಂತ್ರ ನಿರ್ದೇಶಕರಾಗ್ತಿದ್ದಾರೆ. ಗುರಿಯೊಂದಿಗೆ ಗುರುಗಳ ಬೆಂಬಲದಿಂದ ಸಿನಿಮಾ ಶುರುವಿಟ್ಟಿರೋ ಅಭಿ, ಅವ್ರಂತೆ ಡಿಫರೆಂಟ್ ಆಗಿ ನೋಡುಗರಿಗೆ ಒಂದು ಫೀಲ್ ಗುಡ್ ಮೂವಿ ಮಾಡೋ ಮನಸ್ಸು ಮಾಡಿದ್ದಾರೆ. ಅದ್ರ ಪ್ರತಿಫಲವೇ ಈ ವ್ಹಾವ್ ಫೀಲ್ ಕೊಡೋ ಟೀಸರ್ ಝಲಕ್.

ಇದು ಮನುಷ್ಯರ ನಡುವಿನ ಸಂಬಂಧಗಳು ಹಾಗೂ ಮಾನವೀಯ ಮೌಲ್ಯಗಳ ನೆಲಗಟ್ಟಿನಲ್ಲಿ ಮಸ್ತ್ ಮನರಂಜನೆ ಕೊಡೋ ಸಿನಿಮಾ ಆಗಿದೆ.  ಪಕ್ಕಾ ಕಮರ್ಷಿಯಲ್ ಎಲಿಮೆಂಟ್ಸ್​​ನೊಂದಿಗೆ ಅಲ್ಲಿನ ಸಂಸ್ಕೃತಿ , ಮಣ್ಣಿನ ಸೊಗಡು , ಗ್ರಾಮೀಣ ಪರಿಸರವನ್ನ ಅದ್ಭುತವಾಗಿ ಕಟ್ಟಿಕೊಡೋ ಪ್ರಾಮಾಣಿಕ ಪ್ರಯತ್ನ ಆಗಿದೆ.

ನಾಯಕ ನಟನಾಗಿ ಸಲಗ ಚಿತ್ರದಲ್ಲಿ ಕೆಂಡ ಪಾತ್ರ ನಿರ್ವಹಿಸಿದ್ದ  ಶ್ರೇಷ್ಟ  ಕಾಣಸಿಗುತ್ತಿದ್ದು, ನಾಯಕಿಯಾಗಿ ಬೆಂಕಿ ಚಿತ್ರ ಖ್ಯಾತಿಯ ಶ್ರುತಿ ಪಾಟೀಲ್ ನಟಿಸಿದ್ದಾರೆ. ಹಿರಿಯ ಕಲಾವಿದ ಜಹಾಂಗೀರ್, ಯಶ್ ಶೆಟ್ಟಿ ಸೇರಿದಂತೆ ನುರಿತ ಕಲಾವಿದರು ತಾರಾಗಣದಲ್ಲಿದ್ದಾರೆ. ಚಿತ್ರದಲ್ಲಿ 90% ಮಂದಿ ಶ್ರೀಸಾಮಾನ್ಯರನ್ನೇ ಬಳಸಿ ಚಿತ್ರಿಸಿರೋದು ಮತ್ತೊಂದು ವಿಶೇಷ.

ತೆರೆಯ ಹಿಂದೆ ಟಗರು ಮತ್ತು ಸಲಗದಂತಹ ಬ್ಲಾಕ್ ಬಸ್ಟರ್ ಹಿಟ್ ಚಿತ್ರಗಳ ತಂತ್ರಜ್ಞರ ಕೈಚಳಕವಿದೆ. ಅಂದಿನ ಮುಂಗಾರು ಮಳೆ, ದುನಿಯಾ ಚಿತ್ರಗಳಿಗೆ ಸಂಕಲನ ಮಾಡಿ ಸಂಚಲನ ಸೃಷ್ಟಿ ಮಾಡಿದ್ದ ದೀಪು ಎಸ್ ಕುಮಾರ್ ಈ ಚಿತ್ರಕ್ಕೆ ಎಡಿಟಿಂಗ್ ಕಾರ್ಯ ಮಾಡಿದ್ದಾರೆ. ಟಗರು, ಸಲಗ ಚಿತ್ರಗಳಿಂದ ಬ್ರ್ಯಾಂಡ್ ಆದ ಚರಣ್ ರಾಜ್ ಸಂಗೀತ, ಸಲಗ ಕ್ಯಾಮೆರಾಮ್ಯಾನ್ ಶಿವಸೇನ ಸಿನಿಮಾಟೋಗ್ರಫಿ ಚಿತ್ರಕ್ಕಿದೆ. ಮಾಸ್ ಮತ್ತು ಕ್ಲಾಸ್ ಚಿತ್ರಗಳ ಸಂಭಾಷಣೆಯಿಂದ ರುಚಿಸುವುದರಲ್ಲಿ ಪಂಟರ್ ಅನಿಸಿಕೊಂಡಿರೋ ಬರಹಗಾರ ಮಾಸ್ತಿ ಈ ಚಿತ್ರದಲ್ಲಿ ಡೈರೆಕ್ಟರ್ ಅಭಿಗೆ ಡೈಲಾಗ್ಸ್ ಬರೆಯೋಕೆ ಕೈ ಜೋಡಿಸಿದ್ದಾರೆ. ಗುರು ಶಿಷ್ಯರು ನಂತ್ರ ಮಾಸ್ತಿ ಬರಹದ ಕಂಟೆಂಟ್ ಬೇಸ್ಡ್ ಸಿನಿಮಾ ಇದು.

ಧರ್ಮದ ಮೇಲೆ ಕರ್ಮವೇ ತಾಂಡವಾಡ್ತಿರೋದನ್ನ ಹೇಳೋಕೆ ಹೊರಟಿರೋ ಈ ಯುವ ಸಿನಿಮೋತ್ಸಾಹಿ ಪಡೆಗೆ ಕ್ರಿಸ್ಟೋಫರ್ ಕಿಣಿ ಅನ್ನೋ ಯುವ ನಿರ್ಮಾಪಕ ಬಂಡವಾಳ ಹೂಡಿರೋದು ಇಂಟರೆಸ್ಟಿಂಗ್. ಸದ್ಯದಲ್ಲೇ ಚಿತ್ರತಂಡ ಮತ್ತಷ್ಟು ಮಾಹಿತಿ ರಿವೀಲ್ ಮಾಡಲಿದ್ದು, ಟಾಪ್ ಟೆಕ್ನಿಷಿಯನ್ಸ್ ಟ್ಯಾಲೆಂಟ್ ದೊಡ್ಡ ಪರದೆ ಮೇಲೆ ಅನಾವರಣಗೊಳ್ಳಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES
- Advertisment -
Google search engine

Most Popular

Recent Comments