Site icon PowerTV

ಚಳ್ಳಕೆರೆ ನಗರದಲ್ಲಿ ಸಾಗಿದ ಭಾರತ್ ಜೋಡೊ ಯಾತ್ರೆ: ಮೆರುಗು ಹೆಚ್ಚಿಸಿದ ಕಲಾತಂಡಗಳು

ಚಳ್ಳಕೆರೆ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ಜೋಡೊ ಪಾದಯಾತ್ರೆ ನಗರದ ಹೊರವಲಯದ ನಗರಂಗೆರೆಯ ಗಂಧರ್ವ ಹೋಟೆಲ್ ಮುಂಭಾಗದಿಂದ ಬುಧವಾರ ಬೆಳಿಗ್ಗೆ ಆರಂಭವಾಯಿತು.

ಚಳ್ಳಕೆರೆ ಹೊರವಲಯದ ಎಸ್‌ಆರ್‌ಎಸ್ ಶಾಲೆಯ ಸಮೀಪದಲ್ಲಿ ವಾಸ್ತವ್ಯ ಹೂಡಿದ್ದ ಯಾತ್ರಾರ್ಥಿಗಳು ನಿಗದಿಯಂತೆ ಬೆಳಿಗ್ಗೆ 6.30ಕ್ಕೆ ಪ್ರವೇಶ ದ್ವಾರದ ಸಮೀಪ ಬಂದರು. ರಾಹುಲ್ ಗಾಂಧಿ ಆಗಮಿಸುತ್ತಿದ್ದಂತೆ ಪಾದಯಾತ್ರೆ ಹೊರಟಿತು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಾಥ್ ನೀಡಿದರು. ಅದಾಗಲೇ ಸ್ಥಳದಲ್ಲಿ ಸೇರಿದ್ದ ಸಾವಿರಾರು ಜನರು ಘೋಷಣೆ ಕೂಗಿ ಹರ್ಷೋದ್ಘಾರ ಮಾಡಿದರು.

ತಮಟೆ, ಪಟಕುಣಿತ, ಗಾರುಡಿ ಗೊಂಬೆ, ಖಾಸಬೇಡರ ಪಡೆ ಸೇರಿ ಹಲವು ಕಲಾತಂಡಗಳು ಪಾದಯಾತ್ರೆಯ ಮೆರುಗು ಹೆಚ್ಚಿಸಿವೆ. ಮಾರ್ಗದ ಎರಡೂ ಬದಿಯಲ್ಲಿ ನಿಂತಿರುವ ಜನರು ಪಾದಯಾತ್ರೆ ಕಣ್ತುಂಬಿಕೊಂಡರು. ರಾಹುಲ್ ಗಾಂಧಿ ಹಾಗೂ ಸಿದ್ದರಾಮಯ್ಯ ಅವರು ಜನರತ್ತ ಕೈಬೀಸಿ ಹರ್ಷ ವ್ಯಕ್ತಪಡಿಸಿದರು. ನೆಹರೂ ವೃತ್ತದಲ್ಲಿರುವ ನೆಹರೂ ಪ್ರತಿಮೆಗೆ ರಾಹುಲ್ ನಮನ ಸಲ್ಲಿಸಿದರು.

13ನೇ ದಿನದ ಪಾದಯಾತ್ರೆ ಚಳ್ಳಕೆರೆ ನಗರದಲ್ಲಿ ಸಾಗಿ ಬೆಳಿಗ್ಗೆ 11 ಗಂಟೆಗೆ ತಾಲ್ಲೂಕಿನ ಗಿರಿಯಮ್ಮನಹಳ್ಳಿ ತಲುಪಲಿದೆ. ಅಲ್ಲಿಂದ ಸಂಜೆ 4 ಗಂಟೆಗೆ ಪುನರಾರಂಭ ಅಗುವ ಪಾದಯಾತ್ರೆ ಹಿರೇಹಳ್ಳಿ ಸಮೀಪದ ಬೀದರ್-ಶ್ರೀರಂಗಪಟ್ಟಣ ಹೆದ್ದಾರಿಯ ಟೋಲ್ ಬಳಿ ಅಂತ್ಯವಾಗಲಿದೆ.

Exit mobile version