Site icon PowerTV

ನ್ಯಾಯ ಸಿಗದೇ ಆತ್ಮಹತ್ಯೆ; ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಲುಮರದ ವೀರಾಚಾರಿ.!

ದಾವಣಗೆರೆ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಪರಿಸರ ಪ್ರೇಮಿ ಎಂದೇ ಪ್ರಸಿದ್ಧಿ ಪಡೆದ ಮಿಟ್ಲಕಟ್ಟೆ ವೀರಾಚಾರಿ‌‌ ಅವರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಇಂದು ಮಧ್ಯರಾತ್ರಿ ಸಾಲುಮರದ ವೀರಾಚಾರಿ ಮರಕ್ಕೆ ನೇಣುಬಿಗಿದುಕೊಂಡು ಸಾವನ್ನಪ್ಪಿದ್ದಾರೆ. 3000ಕ್ಕೂ ಹೆಚ್ಚು ಮರಗಳನ್ನು ಬೆಳೆಸಿ ರಾಜ್ಯಕ್ಕೆ ವೀರಾಚಾರಿ ಚಿರಪರಿಚಿತರಾದರು. ಸಾಲುಮರ ಬೆಳೆಸಿದ್ದ ಪರಿಸರ ಪ್ರೇಮಿಗೆ ಸರ್ಕಾರ ರಾಜೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು.

ಇತ್ತೀಚಿಗೆ ಮಿಟ್ಲಕಟ್ಟೆ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ಅಕ್ರಮದ ವಿರುದ್ಧ ವೀರಾಚಾರಿ ಹೋರಾಟ ಮಾಡುತ್ತಿದ್ದರು. ನ್ಯಾಯಬೆಲೆ ಅಂಗಡಿಯಲ್ಲಿ ಬಡವರಿಗೆ ಸೂಕ್ತವಾಗಿ ಅಕ್ಕಿ ವಿತರಣೆಯಾಗುತ್ತಿಲ್ಲ. ನ್ಯಾಯಬೆಲೆ ಅಕ್ರಮದ ವಿರುದ್ಧ ನಿರಂತರವಾಗಿ ಕಳೆದ ಒಂದು ವರ್ಷದಿಂದ ವೀರಾಚಾರಿ ಹೋರಾಟ ನಡೆಸುತ್ತಿದ್ದರು.

ನಿನ್ನೆ ಇದೇ ವಿಚಾರವಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನ್ಯಾಯ ಬೆಲೆ ಅಂಗಡಿ ರದ್ದು ಮಾಡಬೇಕು. ಬೇಡವೇ ಎಂಬ ಬಗ್ಗೆ ಚರ್ಚೆ ನಡೆದಿತ್ತು. ಆದರೆ, ನ್ಯಾಯಾಲಯದಲ್ಲಿ ನ್ಯಾಯ ಸಿಗದಿದ್ದರೆ ಜನರಿಗೆ ನ್ಯಾಯ ಸಿಗದಿದ್ದರೆ ದೇವರಲ್ಲಿ ನ್ಯಾಯ ಸಿಗದಿದ್ದರೆ ನೇಣಿಗೆ ಶರಣು ಎಂದು ವೀರಾಚಾರಿ ವಾಗ್ದಾನ ಮಾಡಿದ್ದರು.

ವಾಗ್ದಾನದಂತೆ ಇಂದು ತಡರಾತ್ರಿ 2 ಗಂಟೆ ಸುಮಾರಿಗೆ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಮಿಟ್ಲಕಟ್ಟೆ ವೀರಾಚಾರಿ ನೇಣಿಗೆ ಶರಣಾಗಿದ್ದಾರೆ.

Exit mobile version