Site icon PowerTV

ಈ ಬಾರಿ ಗಣೇಶ ಮೂರ್ತಿಗಳ ಬೆಲೆ ಹೆಚ್ಚಳ ಸಾಧ್ಯತೆ

ಶಿವಮೊಗ್ಗ : ಗಣಪತಿ ಹಬ್ಬ ಆಚರಿಸಲು ಈಗಾಗಲೇ ದೇಶದೆಲ್ಲೆಡೆ ತಯಾರಿ ನಡೆಸಲಾಗುತ್ತಿದೆ. ಅದರಂತೆ ಮಲೆನಾಡಿನಲ್ಲಿ ಗಣಪತಿ ಮೂರ್ತಿ ರಚಿಸುವವರು ಕೂಡ, ಕಳೆದೊಂದು ತಿಂಗಳಿನಿಂದ ಬ್ಯುಸಿಯಾಗಿದ್ದಾರೆ. ಜೇಡಿ ಮಣ್ಣಿನ ಕೊರತೆ ಮತ್ತು ಜೇಡಿ ಮಣ್ಣಿಗೆ ಬೆಲೆ ಹೆಚ್ಚಾಗಿರುವ ಪರಿಣಾಮ ಗಣಪತಿ ತಯಾರಿಕೆಗೆ ಹೆಚ್ಚು ಖರ್ಚಾಗುತ್ತಿದೆ. ಇದರಿಂದಾಗಿ ಗಣಪತಿ ತಯಾರಕರು ಹೆಚ್ಚು ಹಣ ತೆತ್ತು ಜೇಡಿ ಮಣ್ಣನ್ನ ಸಂಗ್ರಹಿಸುತ್ತಿದ್ದಾರೆ. ಇನ್ನು ಕಳೆದೆರೆಡು ವರ್ಷಗಳಿಂದ ಕೊರೋನಾ, ವಿಪರೀತ ಮಳೆಯಿಂದಾಗಿ, ಗಣಪತಿ ಹಬ್ಬ ಕಳೆಗುಂದಿದ್ದು, ವ್ಯಾಪಾರವಿಲ್ಲದೇ ಕಂಗಾಲಾಗಿದ್ದ ಗಣಪತಿ ತಯಾರಕರು, ಈ ಬಾರಿಯಾದರೂ, ವ್ಯಾಪಾರವಾಗುವ ನಿರೀಕ್ಷೆಯಲ್ಲಿದ್ದಾರೆ.

ಪ್ರಸ್ತುತ, ಎರೆಮಣ್ಣಿನ ದರ ಕೂಡ ಹೆಚ್ಚಾದಂತೆ ಮೂರ್ತಿಗಳನ್ನು ಮಾಡುವುದು ಕಷ್ಟಸಾಧ್ಯವಾಗುತ್ತಿದೆ. ಒಂದು ಲೋಡ್ ಜೇಡಿ ಮಣ್ಣಿನ ದರ ಕಳೆದ ಬಾರಿಗೆ ಹೋಲಿಸಿದರೆ, ಸುಮಾರು 400 ರಿಂದ 500 ರೂ.ವರೆಗೆ ಹೆಚ್ಚಾಗಿದೆ. ನೈಸರ್ಗಿಕ ಬಣ್ಣಗಳ ದರ ಸಹ ಜಾಸ್ತಿಯಾಗಿದೆ. ನೈಸರ್ಗಿಕ ಬಣ್ಣಗಳ ಲೇಪನ ಹಾಗೂ ಎರೆಮಣ್ಣು, ಜೇಡಿಮಣ್ಣುವಿನಿಂದ ಕೂಡಿದ ಪರಿಸರ ಸ್ನೇಹಿ ಗಣಪತಿ ರಚಿಸಲು, ಹೆಚ್ಚು ಹಣ ಖರ್ಚಾಗುತ್ತಿದೆ.ಹೀಗಾಗಿ ಗಣಪತಿ ಮೂರ್ತಿಗಳ ದರ ಈ ಬಾರಿ ಹೆಚ್ಚಳವಾಗುವ ಸಾಧ್ಯತೆಗಳು ಹೆಚ್ಚಿವೆ.

ಒಟ್ಟಿನಲ್ಲಿ, ಮಾರುಕಟ್ಟೆಯಲ್ಲಿ ಗಣಪತಿ ಮೂರ್ತಿಗಳ ಭರಾಟೆ ಈಗಾಗಲೇ ಆರಂಭವಾಗಿಬಿಟ್ಟಿದೆ. ಸಂಘಗಳು ಪರಿಸರ ಮಾಲಿನ್ಯವಾಗದಂತಹ ಪರಿಸರ ಸ್ನೇಹಿ ಗಣಪತಿಗಳನ್ನು ಪ್ರತಿಷ್ಠಾಪಿಸುವತ್ತ ಚಿಂತಿಸಬೇಕಿದೆ.

ಗೋ.ವ. ಮೋಹನಕೃಷ್ಣ, ಪವರ್ ಟಿ.ವಿ., ಶಿವಮೊಗ್ಗ

Exit mobile version