Sunday, August 24, 2025
Google search engine
HomeUncategorizedಆನ್‌ಲೈನ್ ದೋಖಾ; ಮೂವರು ಆರೋಪಿಗಳು ಅಂದರ್

ಆನ್‌ಲೈನ್ ದೋಖಾ; ಮೂವರು ಆರೋಪಿಗಳು ಅಂದರ್

ಮೈಸೂರು : ಸರ್ಕಾರಿ ಕೆಲಸವೂ ಆಗಿರಲಿಲ್ಲ. ವರ್ಷಕ್ಕೆ ಕೋಟಿ ಸಂಪಾದನೆ ಮಾಡುವ ಜಾಗವೂ ಅಲ್ಲ. ತಕ್ಕಮಟ್ಟಿಗಿನ ಕೆಲಸ ತೆಗೆದುಕೊಳ್ಳಲು ಹಾಕಿದ್ದ ಅರ್ಜಿ ಅದು. ಸರಿಯಾದ ವೆಬ್‌ಸೈಟ್‌ಗೇ ಅರ್ಜಿ ಹಾಕಿದ್ರೂ ಮೋಸ ಆಗಿತ್ತು.

ಮೈಸೂರಿನಲ್ಲೊಬ್ಬ ಕೆಲಸ ಪಡೆಯುವ ಆಸೆಯಲ್ಲಿ ಬರೋಬ್ಬರಿ‌ 49 ಲಕ್ಷ ಕಳೆದುಕೊಂಡಿದ್ದು, ಹಣ ಪೀಕಿದ್ದ ಆಸಾಮಿಗಳ ಹೆಡೆಮುರಿ ಕಟ್ಟಲಾಗಿದೆ. ದೇಶವ್ಯಾಪಿ ಆನ್‌ಲೈನ್ ದೋಖಾ ಮಾಡುತ್ತಿದ್ದ 3 ಆರೋಪಿಗಳನ್ನು ಸೈಬರ್ ಪೊಲೀಸರು ಬಂಧಿಸಿ ಹಣವನ್ನೂ ಕಕ್ಕಿಸಲಾಗುತ್ತಿದೆ.ಜಿಲ್ಲಾ ಸಿ.ಇ.ಎನ್ ಕೈಂ ಪೊಲೀಸ್ ಠಾಣೆಗೆ ದಿನಾಂಕ 29.06.2022 ರಂದು ಮೈಸೂರು ಮೂಲದ ವ್ಯಕ್ತಿ ತಾನು ಆನ್‌ಲೈನ್ ವೆಬ್‌ಸೈಟ್‌ನಿಂದ ಮೋಸ ಹೋಗಿದ್ದಾಗಿ ದೂರು ನೀಡಿದ್ದ. ಆತ ಕೊರೋನಾದಿಂದಾಗಿ ಕೆಲಸ ಕಳೆದುಕೊಂಡಿದ್ದು, ಬೇರೆ ಕೆಲಸ ಪಡೆಯುವ ಸಲುವಾಗಿ ಗೂಗಲ್‌ನಲ್ಲಿ ಸರ್ಚ್ ಮಾಡುವಾಗ ಎಮಿನೆಂಟ್ ಮೈಂಡ್ ಎಂಬ ಕಂಪನಿಯ ವೆಬ್ ಸೈಟ್ ಬಗ್ಗೆ ತಿಳಿದುಕೊಂಡಿದ್ದ.

ಮಾಹಿತಿ ಮೇರೆಗೆ ಕೆಲಸಕ್ಕೆ ಅರ್ಜಿ ಹಾಕಿದ ಆತ ಅವರು ನೀಡಿದ ಮಾಹಿತಿಯಿಂದಾಗ 05.11.2020 ರಿಂದ ದಿನಾಂಕ 04.04.2022 ರವರೆಗೆ 48,80,200/- ರೂ ಹಣವನ್ನು ಎಮಿನೆಂಟ್ ಮೈಂಡ್ ವಿ ಸೋರ್ಸ್ ಹಾಗೂ ವಿವಿಧ ಖಾತೆಗಳಿಗೆ ಕಳುಹಿಸಿದ್ದಾನೆ. ಆದರೆ ಆ ಕಂಪನಿಯು ಯಾವುದೇ ಕೆಲಸ ಕೊಡಿಸದೇ ಇದ್ದಾಗ ಹಣವನ್ನು ವಾಪಸ್‌ ಕೊಡುವಂತೆ ಆತ ಕೇಳಿದಾಗ, ಕಂಪನಿಯು ಹಣವನ್ನು ವಾಪಸ್ ಕೊಡುವುದಾಗಿ ಹೇಳಿ, ಇಲ್ಲಿಯವರೆಗೂ ಕೊಡದೆ ಇದ್ದುದರಿಂದ ತಾನು ಮೋಸ ಹೋಗಿರುವುದು ಗೊತ್ತಾಗಿದೆ. ಆಗ ಮೈಸೂರು ಜಿಲ್ಲಾ ಸಿ.ಇ.ಎನ್ಕೈಂ ಪೊಲೀಸ್ರಿಗೆ ದೂರು ನೀಡಿದ್ದಾನೆ.

ಇನ್ನೂ ದೂರಿನ ಆಧಾರದಲ್ಲಿ ಸೈಬರ್ ಠಾಣೆ ಪೊಲೀಸರು ಕಲಂ 66(ಸಿ), 66(ಬಿ) ಐ.ಟಿ. ಕಾಯಿದೆ ಮತ್ತು 420 ಐ.ಪಿ.ಸಿ. ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ. ತನಿಖೆಯಲ್ಲಿ ಬೆಂಗಳೂರು ಮೂಲದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳೆಲ್ಲಾ ಎಸ್‌ಎಸ್‌ಎಲ್‌ಸಿ, ಡಿಪ್ಲೋಮಾ ಹಾಗೂ ಪಿಯು ಮಾಡಿದವರು. ಮೊದಲು ಅರ್ಜಿ ಹಾಕಲು 1 ಸಾವಿರ ಕಟ್ಟಿಸಿಕೊಂಡ ಆಸಾಮಿಗಳು ನಂತರ ಇಂಟರ್ವ್ಯೂ ಅಟೆಂಡ್ ಮಾಡಲು 25 ಸಾವಿರ ಕಟ್ಟಿಸಿದ್ದಾರೆ. ಒಂದು ಬಾರಿ ಇಂಟರ್ವ್ಯೂ ಅಟೆಂಡ್ ಮಾಡದೇ ಹೋದರೆ ಮತ್ತೆ ಹಣ ಕಟ್ಟಬೇಕು ಎಂದು ಕಟ್ಟಿಸಿದ್ದಾರೆ. ಇದೇ ರೀತಿ ವರ್ಷದಿಂದ ಪದೇ ಪದೇ ದುಡ್ಡು ಕಟ್ಟಿಸಿ ಬರೋಬ್ಬರಿ‌ 48,80,200 ರೂಪಾಯಿ ಪೀಕಿದ್ದಾರೆ. ಸ್ವಲ್ಪ ಹಣ ಕಟ್ಟಿ ಕೆಲಸ ಸಿಕ್ಕದಿದ್ದಾಗ ತನ್ನ ಹಣ ವಾಪಸ್ ಕೊಡಬೇಕೆಂದು ಸಂತ್ರಸ್ತ ಕೇಳಿದಾಗ ಆ ಹಣ ವಾಪಸ್ ಕೊಡಲು ಟ್ಯಾಕ್ಸ್ ರೂಪದಲ್ಲಿ ಮತ್ತೆ ಹಣ ಸುಲಿದಿದ್ದಾರೆ. ಆರೋಪಿಗಳಿಂದ
24 ಲಕ್ಷ ರೂ. ನಗದು ಸೇರಿ ಕೃತ್ಯಕ್ಕೆ ಬಳಸಿದ್ದ ವಿವಿಧ ಉಪಕರಣಗಳನ್ನು ವಶಕ್ಕೆ ಪಡೆಯಲಾಗಿದೆ.

ಒಟ್ಟಾರೆ ಆನ್‌ಲೈನ್ ವೆಬ್‌ಸೈಟ್ ನಂಬಿಕೊಂಡು ಕೈಲಿದ್ದ ಹಣ, ಅಮ್ಮನ ಒಡವೆಗಳು, ಕ್ರೆಡಿಟ್ ಕಾರ್ಡ್ ದುಡ್ಡು ಎಲ್ಲವನ್ನೂ ಕಳೆದುಕೊಂಡು ಸಾಲ ಮಾಡಿಕೊಂಡಿದ್ದು, ನೀವೂ ಎಚ್ಚರವಾಗಿರಿ.

ಕ್ಯಾಮರಾ ಮನ್ ಹರೀಶ್ ಜೊತೆ ಸುರೇಶ್ ಬಿ.ಪವರ್ ಟಿವಿ ಮೈಸೂರು.

RELATED ARTICLES
- Advertisment -
Google search engine

Most Popular

Recent Comments