Site icon PowerTV

ನನಗೆ ಕಿರುಕುಳ ಕೊಡುತ್ತಿದ್ದಾರೆ : ಡಿ ಕೆ ಶಿವಕುಮಾರ್​

ಕೊಪ್ಪಳ : ಇಡಿಯನ್ನು ಬಳಸಿಕೊಂಡು ನನಗೆ ಕೊಡಬಾರದ ಕಿರುಕುಳ ಕೊಡುತ್ತಿದ್ದಾರೆ ಎಂದು ಕೊಪ್ಪಳದ ಬಸಾಪೂರ‌ ವಿಮಾನ ನಿಲ್ದಾಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​​ನ ಪ್ರಬಲ ನಾಯಕರ ವಿರುದ್ಧ ಬಿಜೆಪಿ ತನಿಖೆ ಅಸ್ತ್ರ ಪ್ರಯೋಗ ಮಾಡ್ತಿದೆ. ಯಾರಿಂದ ಬಿಜೆಪಿಗೆ ತೊಂದರೆ ಆಗುತ್ತೋ ಅವರ ಮೇಲೆ ಈ ಪ್ರಯೋಗ ನಡಿಯುತ್ತಿದೆ. ನಾನು, ಚಿದಂಬರಂ, ರಾಹುಲ್​ಗಾಂಧಿ,‌ ಸೋನಿಯಾ ಗಾಂಧಿ ಹೀಗೆ ಎಲ್ಲರ ಮೇಲೆ‌ ತನಿಖೆ ಮಾಡುತ್ತಿದ್ದಾರೆ. ಅಲ್ಲದೇ ಇಡಿಯನ್ನು ಬಳಸಿಕೊಂಡು ನನಗೆ ಕೊಡಬಾರದ ಕಿರುಕುಳ ಕೊಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ದ ಕಿಡಿಕಾಡಿದರು.

ಇನ್ನು ನಮಗೆಲ್ಲಾ ನ್ಯಾಯಾಲಯದ ಮೇಲೆ ನಂಬಿಕೆ ಇದೆ. ನನಗೆ 60 ದಿನದ ಒಳಗೆ ಬೇಲ್ ಸಿಕ್ಕಿದೆ, ಆಗಲೇ ಚಾರ್ಜ್ ಶೀಟ್ ಹಾಕಬಹುದಿತ್ತು. ರಾಜಕೀಯ ಉದ್ದೇಶದಿಂದ ಹಾಕಿದ ಕೇಸ್​​ಗಳು ಇವೆಲ್ಲಾ, ಇವನ್ನೆಲ್ಲ ನಾವು ಎದುರಿಸುತ್ತೇವೆ. ಮೇಲಿಂದ ಮೇಲೆ ನೋಟೀಸ್, ಸಮನ್ಸ್​​ ಕೊಡ್ತಿದ್ದಾರೆ ಎಂದು ತಿಳಿಸಿದರು.

ಚುನಾವಣೆ ಸಮಯಕ್ಕೆ ತನಿಖೆ ಚುರುಕು ಮಾಡಿದ್ದಾರೆ. ದಿನವೂ ನನಗೆ, ನನ್ನ ಕುಟುಂಬ ಮತ್ತು ಸ್ನೇಹಿತರಿಗೆ ನೋಟೀಸ್ ಬರ್ತಿವೆ. ಈ ಟೈಮ್​​ನಲ್ಲಿ ನನ್ನ ಬ್ಯೂಸಿ ಆಗಿಡಬೇಕು ಅಂತಾ ಹಿಗೆಲ್ಲ ಮಾಡ್ತಿದ್ದಾರೆ. ಎಲ್ಲ ‌ಸಂಸ್ಥೆಗಳನ್ನ ದುರುಪಯೋಗ ಮಾಡಿಕೊಳ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಅಗ್ನಿಪಥ್​​ ಯೋಜನೆಗೆ ‌ನೋಟಿಫಿಕೇಷನ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಯುವಕರನ್ನ ಬಿಜೆಪಿ ಕಚೇರಿಗೆ ಸೆಕ್ಯೂರಿಟೀ ಗಾರ್ಡ್ ಮಾಡಲು ಹೊರಟಿದ್ದಾರೆ. ಮೊದಲು ಬಿಜೆಪಿ ನಾಯಕರು ತಮ್ಮ ಮಕ್ಕಳನ್ನ ಅಗ್ನಿ ‌ವೀರರಾಗಿ ಮಾಡಲಿ, ನಾವು ಸರ್ವೆ ಮಾಡಿ ಟಿಕೇಟ್ ನೀಡುತ್ತೇವೆ ಎಂದಿದ್ದಾರೆ.

Exit mobile version