Site icon PowerTV

ಇನ್ಮುಂದೆ ಪೆಟ್ರೋಲ್ ಬಂಕ್ ಮುಂದೆ BMTC ಕ್ಯೂ..?

ಬೆಂಗಳೂರು : ಸಿಲಿಕಾನ್ ಸಿಟಿ ಜನರ ಪೈಕಿ 30 ರಿಂದ 35 ಲಕ್ಷ ಜನರು ಸಂಚಾರಕ್ಕೆ ಬಿಎಂಟಿಸಿಯನ್ನೆ ಅವಲಂಬಿಸಿದ್ದಾರೆ.‌ ಹೀಗೆ ಲಕ್ಷಾಂತರ ಜನರು ನಂಬಿಕೊಂಡಿರುವ ಬಿಎಂಟಿಸಿ ಬಸ್ ಸಂಚಾರ ಮಾಡಲು ಸಂಕಷ್ಟವೊಂದು ಎದುರಾಗಿದೆ‌‌.‌ಯಾಕಂದ್ರೆ ಬಿಎಂಟಿಸಿಯಲ್ಲಿ ಡೀಸೆಲ್ ಕೊರತೆ ಹೆಚ್ಚಾಗಿದ್ದು, ಕಳೆದ ಎರಡು ದಿನಗಳಿಂದ ಡಿಪೋಗಳಿಗೆ ಡೀಸೆಲ್ ಪೂರೈಕೆಯಾಗದೆ ಬಿಎಂಟಿಸಿ ಬಸ್‌ಗಳೇ ಖಾಸಗಿ ಪೆಟ್ರೋಲ್ ಬಂಕ್‌ಗಳತ್ತ ಸಂಚಾರ ಮಾಡ್ತಿವೆ.ಬಿಎಂಟಿಸಿಯಲ್ಲಿರುವ 46 ಡಿಪೊ ಬಂಕ್‌ಗಳ ಪೈಕಿ ಬಹುತೇಕ ಎಲ್ಲಾ ಡಿಪೋಗಳಲ್ಲಿ ಡೀಸೆಲ್ ಖಾಲಿಯಾಗಿದ್ದು, ಬಸ್‌ಗಳು ಖಾಸಗಿ ಬಂಕ್‌ಗಳಲ್ಲೇ ಡೀಸೆಲ್ ತುಂಬಿಸಿಕೊಳ್ತಾಯಿವೆ.‌ ಬಿಎಂಟಿಸಿಗೆ ನಿತ್ಯ 3.45 ಲಕ್ಷ ಲೀಟರ್ ಡೀಸೆಲ್ ಬೇಕಾಗಿದ್ದು, ಸದ್ಯ ಬಿಎಂಟಿಸಿ ಬಳಿ ಮುಂದಿನ ನಾಲ್ಕೈದು ದಿನಗಳಿಗಾಗುವಷ್ಟು ಡೀಸೆಲ್ ಮಾತ್ರ ಇದೆ.‌ ಹೀಗಾಗಿ ಡೀಸೆಲ್ ಕೊರತೆಯಿಂದಾಗಿ ನಾಲ್ಕೈದು ದಿನಗಳ ನಂತ್ರ ಬಸ್ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.

ಈ ಹಿಂದೆ ಬಿಎಂಟಿಸಿ ಟೆಂಡರ್ ಮೂಲಕ ಸಗಟು ಖರೀದಿ ದರ ಪ್ರತಿ ಲೀಟರ್ ಡೀಸೆಲ್‌ಗೆ 119 ರೂ.ಕೊಟ್ಟು ಖರೀದಿ ಮಾಡ್ತಾಯಿತ್ತು. ಆದ್ರೆ, ಈಗ ಚಿಲ್ಲರೆ ವ್ಯಾಪಾರದಲ್ಲಿ ಡೀಸೆಲ್ ದರ ಲೀಟರ್‌ಗೆ 87 ರೂಪಾಯಿ ಇದೆ.ಇದರಿಂದಾಗಿ ಬಿಎಂಟಿಸಿ, ಚಿಲ್ಲರೆ ವ್ಯಾಪಾರಿಗಳಿಂದಲೇ ಡೀಸೆಲ್ ಖರೀದಿ ಮಾಡಲು ಮುಂದಾಗಿದ್ದು, ಲೀಟರ್ ಡೀಸೆಲ್‌ಗೆ 30 ರೂಪಾಯಿ ಉಳಿತಾಯ ಮಾಡಲು ಮುಂದಾಗಿದೆ.‌ ಕೆಲ ದಿನಗಳಿಂದ ಚಿಲ್ಲರೆ ವ್ಯಾಪಾರಿಗಳೇ ಟ್ಯಾಂಕರ್‌ಗಳಲ್ಲಿ ಪ್ರತಿದಿನ ಸಂಸ್ಥೆಗಳ ಡಿಪೋಗಳಲ್ಲಿರುವ ಬಂಕ್‌ಗಳಿಗೆ ಡೀಸೆಲ್ ಪೂರೈಕೆ ಮಾಡುತ್ತಿದ್ದರು.ಅಂದಿನ ಡೀಸೆಲ್ ಮೊತ್ತವನ್ನು ಅಂದೇ ಪಾವತಿಸಿ ಬಿಎಂಟಿಸಿ ಕೈತೊಳೆದುಕೊಳ್ಳುತ್ತಿತ್ತು. ಈ ಪ್ರಕ್ರಿಯೆ ಎರಡು ತಿಂಗಳಿಂದ ನಡೆದುಕೊಂಡು ಬಂದಿದೆ.ಈಗ ಎರಡು ದಿನಗಳಿಂದ ಡಿಪೋ ಬಂಕ್‌ಗಳಿಗೆ ಡೀಸೆಲ್ ಪೂರೈಕೆ ಮಾಡುವುದನ್ನು ವ್ಯಾಪಾರಿಗಳು ಸ್ಥಗಿತಗೊಳಿಸಿದ್ದಾರೆ. ಹೀಗಾಗಿ ಡಿಪೋಗಳಲ್ಲಿ ಡೀಸೆಲ್ ಇಲ್ಲದೆ ಬಂಕ್ ಮುಂದೆ ಕ್ಯೂ ನಿಲ್ಲೋ ಪರಿಸ್ಥಿತಿ ಬಂದಿದೆ.‌ ಈ ಡೀಸೆಲ್ ಸಮಸ್ಯೆ ಸಂಬಂಧ ನಿಗಮ ಪೆಟ್ರೋಲಿಯಂ ಸಚಿವಾಲಯ ಮತ್ತು ರಾಜ್ಯದಲ್ಲಿರುವ ಎಲ್ಲ ತೈಲ ಕಂಪನಿಗಳು ಸಮನ್ವಯಕಾರರಿಗೆ ಪತ್ರ ಬರೆದಿದ್ರೂ ಪ್ರತಿಕ್ರಿಯೆ ಸಿಕ್ಕಿಲ್ಲ.‌ ನಿಗಮದಲ್ಲಿ ಸದ್ಯ 746 ಕೋಟಿ ಸಾಲ ಇದ್ದು ಅದನ್ನ ತೀರಿಸುತ್ತಿದ್ದೆವೆ.‌ ಡೀಸೆಲ್ ಪೂರೈಕೆ ಆಗದ ಹಿನ್ನೆಲೆಯಲ್ಲಿ ‌ಇನ್ಮುಂದೆ ಬಸ್‌ಗಳು ಖಾಸಗಿ ಪೆಟ್ರೋಲ್ ಬಂಕ್‌ಗಳಲ್ಲೇ ಹೋಗಿ ಡೀಸೆಲ್ ಹಾಕಿಸಿಕೊಳ್ತವೆ.‌ ಡೀಸೆಲ್ ಸಮಸ್ಯೆ ಆದ್ರೂ ಯಾವುದೇ ಕಾರಣಕ್ಕು ಬಸ್ ಸಂಚಾರ ನಿಲ್ಲೊದಿಲ್ಲ‌‌. ಸಾರ್ವಜನಿಕರಿಗೆ ಸಮಸ್ಯೆ ಆಗೋದಿಲ್ಲ ಅಂತಾರೆ.‌

ಅಂತೂ ಬಿಎಂಟಿಸಿ ಇಲ್ಲಿಯವರೆಗೂ ಏನೇನೋ ಸಮಸ್ಯೆ ಎದುರಿಸಿದೆ.‌ನಷ್ಟದ ಸುಳಿಯಲ್ಲಿ ಸಿಲುಕಿ ಏಳಲು ಆಗದೇ ಪರದಾಡುತ್ತಿರುವ ನಿಗಮಕ್ಕೆ‌ ಮತ್ತೊಂದು ದೊಡ್ಡ ಸಮಸ್ಯೆ ಎದುರಾಗಿದೆ.‌ ಇನ್ಮುಂದೆ ಬಿಎಂಟಿಸಿ ಬಸ್‌ಗಳು ಖಾಸಗಿ ಬಂಕ್‌ಗಳಿಗೆ ತೆರಳಿದ್ರೆ ಉಂಟಾಗುವ ಟ್ರಾಫಿಕ್ ಜಾಮ್‌ಗೆ ಪ್ರಯಾಣಿಕರ ತೊಂದರೆಗೆ ನಿಗಮವೇ ನೇರ ಹೊಣೆಯಾಗಲಿದೆ.‌

ಕೃಷ್ಣಮೂರ್ತಿ ಪವರ್ ಟಿವಿ ಬೆಂಗಳೂರು

Exit mobile version