Site icon PowerTV

ಕೃಷಿ ಕಾಯ್ದೆಯಂತೆ ‘ಅಗ್ನಿಪಥ್​​ ಯೋಜನೆ’ಯನ್ನು ಹಿಂಪಡೆದುಕೊಳ್ಳಬೇಕು: ರಾಗಾ

ನವದೆಹಲಿ: ಅಗ್ನಿಪಥ ಯೋಜನೆ ಮೂಲಕ ಭಾರತೀಯ ಸೇನೆಯನ್ನು ದುರ್ಬಲಗೊಳಿಸಲಾಗುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಂಡಂತೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಯೋಜನೆಯನ್ನು ವಾಪಸ್‌ ತೆಗೆದುಕೊಳ್ಳಬೇಕಾಗುತ್ತದೆ ಎಂದಿದ್ದಾರೆ.

ನಮ್ಮ ಭಾರತದ ನೆಲದಲ್ಲಿ ಚೀನಾ ಸೇನೆ ಕುಳಿತಿದೆ. ಪ್ರಧಾನಮಂತ್ರಿಗಳೇ, ಸೇನೆಯನ್ನು ಬಲಪಡಿಸುವುದರಲ್ಲಿ ನಿಜವಾದ ದೇಶಭಕ್ತಿ ಅಡಗಿದೆ, ಆದರೆ ನೀವು ‘ಹೊಸ ವಂಚನೆ’ಯಿಂದ ಸೇನೆಯನ್ನು ದುರ್ಬಲಗೊಳಿಸುತ್ತಿದ್ದೀರಿ. ದೇಶದ ಭವಿಷ್ಯ ಉಳಿಸುವ ಈ ಆಂದೋಲನದಲ್ಲಿ ನಾವು ಯುವಕರ ಜೊತೆಗಿದ್ದೇವೆ. ನಾನು ಮತ್ತೆ ಹೇಳುತ್ತಿದ್ದೇನೆ, ನೀವು ‘ಅಗ್ನಿಪಥ್’ ಅನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು ಎಂದು ಟ್ವೀಟ್​ ಮಾಡಿದ್ದಾರೆ.

ರಾಷ್ಟ್ರದ ಬಹುದೊಡ್ಡ ಸಮಸ್ಯೆ ಉದ್ಯೋಗ. ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ನಷ್ಟವನ್ನುಂಟು ಮಾಡುವ ಮೂಲಕ ರಾಷ್ಟ್ರದ ಬೆನ್ನು ಮೂಳೆಯನ್ನು ಮುರಿಯಲಾಗಿದೆ. ಎರಡು-ಮೂರು ಜನ ಉದ್ಯಮಿಗಳ ಕೈಗೆ ದೇಶವನ್ನು ಕೊಟ್ಟಿದ್ದಾರೆ. ಕೊನೆಗೆ ಉದ್ಯೋಗದ ಭರವಸೆಯಂತಿದ್ದ ಸೇನೆಯ ಬಾಗಿಲನ್ನು ಮುಚ್ಚಿದ್ದಾರೆ ಎಂದು ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

‘ಒಂದು ಶ್ರೇಣಿ, ಒಂದು ಪಿಂಚಣಿ’ ಎನ್ನುತ್ತಿದ್ದರು. ಈಗ ‘ಶ್ರೇಣಿಯೂ ಇಲ್ಲ, ಪಿಂಚಣಿಯೂ ಇಲ್ಲ’ ಎನ್ನುತ್ತಿದ್ದಾರೆ. ಒಂದೆಡೆ ಚೀನಾ ನಮ್ಮ ಭೂಪ್ರದೇಶದ ಮೇಲೆ ಕೂತಿದೆ. ಇಂತಹ ಸಂದರ್ಭದಲ್ಲಿ ಸೇನೆಯನ್ನು ಬಲಪಡಿಸುವ ಬದಲು ದುರ್ಬಲಗೊಳಿಸುತ್ತಿದ್ದಾರೆ ಎಂದು ಮೋದಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನ್ಯಾಷನಲ್ ಹೆರಾಲ್ಡ್‌ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯವು ತಮ್ಮನ್ನು ಪ್ರಶ್ನಿಸಿದ ಸಂದರ್ಭ ಬೆಂಬಲಸಿದ ಪಕ್ಷದ ಕಾರ್ಯಕರ್ತರಿಗೆ ರಾಹುಲ್‌ ಗಾಂಧಿ ಇದೇ ಸಂದರ್ಭ ಧನ್ಯವಾದ ಹೇಳಿದ್ದಾರೆ. ಇ.ಡಿ ವಿಚಾರಣೆ ವೇಳೆ ತಾನೊಬ್ಬ ಮಾತ್ರವಲ್ಲ, ಪ್ರಜಾಪ್ರಭುತ್ವಕ್ಕಾಗಿ ಹೋರಾಡುತ್ತಿರುವ ಪ್ರತಿಯೊಬ್ಬರು ತಮ್ಮ ಜೊತೆಗಿದ್ದರು ಎಂದಿದ್ದಾರೆ.

Exit mobile version