Site icon PowerTV

ಅಕ್ರಮ ಮರಳು ದಂಧೆ: ‘ಪವರ್’ ಟಿವಿ ವರದಿ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು

ಹುಬ್ಬಳ್ಳಿ : ಛೋಟಾ ಮುಂಬೈ ಎಂದು ಖ್ಯಾತಿ ಪಡೆದಿರುವ ಹುಬ್ಬಳ್ಳಿ ಸುತ್ತ ಮುತ್ತ ಮರಳು ದಂದೆ ವ್ಯಾಪಕವಾಗಿ ನಡೆಯುತ್ತಿದೆ. ಸರ್ಕಾರ ಎಷ್ಟೇ ಕ್ರಮ ಕೈಗೊಂಡ್ರೂ ಖದೀಮರ ಕಳ್ಳಾಟ ಮಾತ್ರ ನಿಂತಿಲ್ಲ. ಈ ಹಿನ್ನಲೆಯಲ್ಲಿ ಪವರ್ ಟಿವಿ ಸುದ್ದಿ ಬಿತ್ತರಿಸಿದ ನಂತರ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.

ಹುಬ್ಬಳ್ಳಿ ಕೇವಲ ವ್ಯಾಪಾರ ವಹಿವಾಟಿಗೆ ಮಾತ್ರ ಸೀಮಿತವಾಗಿಲ್ಲ, ಅಕ್ರಮ ಮರಳುಗಾರಿಕೆಯಲ್ಲೂ ಮುಂಚೂಣಿಯಲ್ಲಿದೆ, ಸರ್ಕಾರ ಎಷ್ಟೇ ಕ್ರಮ ಕೈಗೊಂಡರೂ ಖದೀಮರು ಮಾತ್ರ ಕಳ್ಳ ಮಾರ್ಗಗಳನ್ನು ಹಿಡಿದುಕೊಂಡು ಅಕ್ರಮವಾಗಿ ಮರಳನ್ನು ಸಾಗಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಪವರ್​ ಟಿವಿ ಸವಿಸ್ತಾರವಾಗಿ ವರದಿ ಬಿತ್ತರಿಸಿದ್ದು ಅಧಿಕಾರಿಗಳು ಅಕ್ರಮ ಅಡ್ಡೆಗಳ ಮೇಲೆ ದಾಳಿ ನಡೆಸಿದ್ದಾರೆ. ಖದೀಮರು ಅಧಿಕಾರಿಗಳು ಬರುತ್ತಿದ್ದಂತೆ ಕಾಲ್ಕಿತ್ತಿದ್ದಾರೆ.

ಖದೀಮರು ಮಣ್ಣಿನ ಉಸುಗು ತಂದು ಮರಳಿಗೆ ಹೊಳಪು ಕೊಟ್ಟು ಮಾರಾಟ ಮಾಡುತ್ತಿದ್ದದ್ದು ಪವರ್ ಟಿವಿ ನಡೆಸಿದ ಕಾರ್ಯಾ ಚರಣೆಯಲ್ಲಿ ಬಯಲಾಗಿದೆ, ಕಪ್ಪು ಮಣ್ಣು ಮಿಶ್ರಿತ ಹಳ್ಳದ ಮರಳು ತಂದು ಅದನ್ನ ನೀರಿನಲ್ಲಿ ತೊಳೆದು ಲಾರಿ ಒಂದಕ್ಕೆ 28 ಸಾವಿರದಿಂದ 35 ಸಾವಿರದವರೆಗೆ ಮಾರಾಟ ಮಾಡಲಾಗುತ್ತಿದೆ, ರಾತ್ರಿ ಹೊತ್ತು ಪಾಸ್ ಇಲ್ಲದೆ ಅಧಿಕಾರಿಗಳಿಗೆ ಮಾಮೂಲು ನೀಡಿ ಮರಳನ್ನ ಹುಬ್ಬಳ್ಳಿಯ ಆನಂದನಗರ ಮುಖ್ಯ ರಸ್ತೆ, ಕಾರವಾರ ರಸ್ತೆಯ ಕಾಶ್ಮೀರ ಗ್ಯಾರೇಜ್ ಹಿಂಭಾಗ, ಕುಂದಗೋಳ ಕ್ರಾಸ್ ಸುತ್ತ ಮುತ್ತ, ಕೇಶ್ವಾಪುರ ಹಾಗೂ ಗಬ್ಬೂರೂ ಪ್ರದೇಶಗಳಲ್ಲಿ ಸ್ಟಾಕ್ ಮಾಡ್ತಾರೆ. ನಂತರ ಹಂತ ಹಂತವಾಗಿ ಖದೀಮರು ಮಾರಾಟ ಮಾಡುತ್ತಿದ್ದರು.

ಪವರ್ ಟಿವಿ ಈ ಬಗ್ಗೆ ವರದಿ ಪ್ರಸಾರ ಮಾಡುತ್ತಿದ್ದಂತೆ ಹುಬ್ಬಳ್ಳಿ ವಿಭಾಗದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ತೇಜಸ್ವಿನಿ, ಕಂದಾಯ ಹಾಗೂ ಪೊಲೀಸ್ ಇಲಾಖೆ ಸಹಕಾರದಿಂದ ಕುಂದಗೋಳ ಕ್ರಾಸ್ ಹಾಗೂ ಇತರೆ ಅಕ್ರಮ ಅಡ್ಡೆಗಳ ಮೇಲೆ ದಾಳಿ ಮಾಡಿದ್ದಾರೆ, ಅಪಾರ ಪ್ರಮಾಣದ ಮರಳು, ಒಂದು ಲಾರಿ ಹಾಗೂ ಟ್ರ್ಯಾಕ್ಟರ್ ವಶ ಪಡಿಸಿಕೊಂಡಿದ್ದಾರೆ.

ಇನ್ನೂ ಕೆಲ ಪೊಲೀಸ್ ಠಾಣೆ ಅಧಿಕಾರಿಗಳು ಅಕ್ರಮ ಮರಳು ಮಾಫಿಯಾಗೆ ಅನುವು ಮಾಡಿಕೊಟ್ಟಿದ್ದಾರೆ ಎನ್ನುವ ಆರೋಪವಿದೆ, ಸದ್ಯ ದಕ್ಷ ಅಧಿಕಾರಿಯಾಗಿರುವ ತೇಜಸ್ವಿನಿ ಕಾರ್ಯಾಚರಣೆ ಯಶಸ್ವಿಗೊಳಿಸಿದ್ದು ಮುಂದಿನ ದಿನಗಳಲ್ಲಾದರೂ ಇದಕ್ಕೆ ಕಡಿವಾಣ ಬೀಳಲಿದೆಯಾ ಎಂದು ಕಾದು ನೋಡಬೇಕಿದೆ.

ಮಲ್ಲಿಕ್ ಬೆಳಗಲಿ ಪವರ್ ಟಿವಿ ಹುಬ್ಬಳ್ಳಿ

Exit mobile version