Tuesday, September 2, 2025
HomeUncategorizedಶರೀಫರ ಕೀರ್ತನೆಗೆ ಜೀವ ತುಂಬಿದ ALL OK ಮೆಲೋಡಿ ವಾಯ್ಸ್

ಶರೀಫರ ಕೀರ್ತನೆಗೆ ಜೀವ ತುಂಬಿದ ALL OK ಮೆಲೋಡಿ ವಾಯ್ಸ್

ಸಮಾಜದ ಅಂಕು ಡೊಂಕುಗಳನ್ನು ಇಂದಿನ ಯುವಜನತೆಗೆ ಇಷ್ಟವಾಗುವ ರೀತಿ ಱಪ್​ ಹಾಡುಗಳ ಮೂಲಕ ಎಲ್ಲರ ಗಮನ ಸೆಳೆದ ಗಾಯಕ ALL OK. ಸಮಾಜದ ಅನ್ಯಾಯದ ವಿರುದ್ಧ ದನಿಯಾಗುವ, ನೊಂದವರ ಪಾಲಿಗೆ ಧೈರ್ಯ ತುಂಬುವ ಇವ್ರ ಹಾಡುಗಳು ಅಂದ್ರೆ, ಅಭಿಮಾನಿಗಳಿಗೆ ಪಂಚಪ್ರಾಣ. ಇದೀಗ All OK ಶಿಶುನಾಳ ಶರೀಫಜ್ಜಯ್ಯನ ಹಾಡಿಗೆ ಜೀವ ತುಂಬಿದ್ದಾರೆ. ಯೆಸ್.. ಸಂತ ಶಿಶುನಾಳರ ನ್ಯೂ ವರ್ಷನ್ ಸಾಂಗ್ ನಿಮಗಾಗಿ.

ಸಂತ ಶರಣರ ಕೀರ್ತನೆಗೆ ಜೀವ ತುಂಬಿದ ALL OK ವಾಯ್ಸ್

ಶರೀಫರ ಗೀತೆಯ ಮೂಲಕ ಪರಿಸರ ಖಾಳಜಿಯ ಸಂದೇಶ

ಒಂದೇ ಹಾಡಿನಲ್ಲಿ ಅರಿವು ಮೂಡಿಸಿದ ಮೆಲೋಡಿ ರ‍್ಯಾಪರ್

ಅಜ್ಞಾನದಿಂದಾಗುವ ಅನಾಹುತಗಳ ಬಗ್ಗೆ ALL OK ಆತಂಕ

ಕರುನಾಡಿನ ಕಬೀರ ಎಂದೇ ಹೆಸರಾದ ಸಂತ, ಶರಣ, ದಾರ್ಶನಿಕರು ನಮ್ಮ ಶಿಶುನಾಳ ಶರೀಫರು. ತಮ್ಮ ತತ್ವ ಪದಗಳ‌ ಮೂಲಕ ಸಮಾಜದ ಓರೆ ಕೋರೆ ತಿದ್ದುವುದರಲ್ಲಿ ಸಿದ್ಧ ಹಸ್ತರು. ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡ ಪ್ರವಾದಿ ಶರೀಪಜ್ಜ. ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿದ್ದ ಶರೀಫರ ಹಾಡುಗಳನ್ನು ಆಲಾಪಿಸುವುದೇ ಪೂರ್ವ ಜನ್ಮದ ಪುಣ್ಯ.

ಶಿಶುನಾಳ ಷರೀಫರು ಸಾಮಾಜಿಕ ತತ್ವಗಳನ್ನು ತಮ್ಮ ಹಾಡುಗಳ ಮೂಲಕ ಜಗತ್ತಿಗೆ ಸಾರಿದ ಹರಿಕಾರರು. ಅವರ ಸೋರುತಿಹುದು ಮನೆಯ ಮಾಳಿಗೆ ಗೀತೆಯನ್ನು ಮರೆಯಲು ಸಾಧ್ಯವೇ ಇಲ್ಲ. ಬದುಕಿನ ಸಾರವನ್ನು ತಮ್ಮ ಸಾಲುಗಳ ಮೂಲಕ ಜಗತ್ತಿಗೆ ಅರ್ಥ ಮಾಡಿಸಿದ ಪುಣ್ಯಾತ್ಮರು. ತರವಲ್ಲ ತಗಿ ನಿನ್ನ ತಂಬೂರಿ, ಮೋಹದ ಹೆಂಡತಿ, ಸೋರುತಿಹುದು ಮನೆಯ ಮಾಳಿಗೆ ಹಾಡುಗಳು ಇಂದಿಗೂ ಎಲ್ಲರಿಗೂ ಕಂಠ ಪಾಠವಾಗಿವೆ.

ಇದೀಗ ಕನ್ನಡದ ರ‍್ಯಾಪರ್ ಆಲ್ ಓಕೆ, ಗಟ್ಟಿ ಸಂದೇಶವಿರುವ ಗೀತೆಯಾದ ಸೋರಿತಿಹುದು ಮನೆಯ ಮಾಳಿಗೆ ಹಾಡನ್ನು ತಮ್ಮದೇ ಸ್ಟೈಲ್ ನಲ್ಲಿ ಹಾಡಿದ್ದಾರೆ. ಪರಿಸರ ಕಾಳಜಿಯನ್ನು ಈ‌ ಹಾಡಿನ‌ ಮೂಲಕ ಅರ್ಥ ಮಾಡಿಸುವ ಪ್ರಯತ್ನ‌ ಮಾಡಿದ್ದಾರೆ.‌ ಈ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿದ್ದು ಬೇಜಾನ್ ಸೌಂಡ್ ಮಾಡ್ತಿದೆ.

ವಾಸ್ತವಕ್ಕೆ ಸಂಬಂಧಪಟ್ಟ ಹಾಡುಗಳ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ ಆಲ್ ಓಕೆ. ಈ ಮುಂಚೆ ರೈತ ಗೀತೆಯೂ ಸಖತ್ ಹಿಟ್ ಆಗಿತ್ತು. ಇದೀಗ ಸೋರುತಿಹುದು ಮನೆಯ ಮಾಳಿಗೆ ಸಾಲುಗಳನ್ನು ಬಳಸಿಕೊಂಡು ತಮ್ಮ ಕಂಠದ ಮೂಲಕ‌ ಅಜ್ಞಾನದಿಂದಾಗುವ ಅನಾಹುತಗಳ ಬಗ್ಗೆ ತಿಳಿಸುವ ಪ್ರಯತ್ನ ಮಾಡಿದ್ದಾರೆ.

ಈ ಹಾಡಿಗೆ ಮ್ಯೂಸಿಕ್‌ ಕಂಪೋಸಿಂಗ್​ನಿಂದ ಹಿಡಿದು ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಆಲ್ ಓಕೆ ಮತ್ತೆ ಎಲ್ಲರ ದಿಲ್ ಗೆದ್ದಿದ್ದಾರೆ. ಈ ಹಾಡಿಗೆ ರಾಜಾರಾಮ್ ರಾಜೇಂದ್ರ‌ ಕ್ಯಾಮೆರಾ ಕೈಚಳಕ ಹಾಗೂ ನಿರ್ದೇಶನವಿದೆ. ಹಾಡಿನಲ್ಲಿ‌ ಅಶ್ವತ್, ರಘು ದೀಕ್ಷಿತ್ ಇಮೇಜ್​​ಗಳು ಅಲ್ಲಲ್ಲಿ  ಕಾಣಿಸಿಕೊಳ್ಳುತ್ತವೆ. ನಗರೀಕರಣದ ಹಾದಿಯಲ್ಲಿ ನಮ್ಮ ಪರಿಸರವನ್ನು ನಾವು ಕಿತ್ತು ತಿನ್ನುತ್ತಿದ್ದೇವೆ. ನಮ್ಮ ಉಸಿರನ್ನು ನಾವೇ ನಾಶ ಮಾಡುತ್ತಿರುವ ಈ ಸಂಧರ್ಭದಲ್ಲಿ ಈ ಗೀತೆ ಸಾಂಧರ್ಭಿಕವಾಗಿದೆ. ಸದಾ ಸಮಾಜದ ಪಿಡುಗುಗಳ ವಿರುದ್ಧ ಒಳ್ಳೆಯ ಗೀತೆ ಬರೆಯುವ ಆಲ್ ಓಕೆಗೆ ಶಿಶುನಾಳ ಶರೀಫರು ಸ್ಪೂರ್ತಿಯಾದದ್ದು ಹೆಮ್ಮೆಯ ವಿಚಾರ.

ರಾಕೇಶ್ ಆರುಂಡಿ, ಫಿಲ್ಮ್ ಬ್ಯುರೋ, ಪವರ್ ಟಿವಿ

RELATED ARTICLES
- Advertisment -
Google search engine

Most Popular

Recent Comments