Site icon PowerTV

ಎಲ್ಲಾ ಮಸೀದಿಯಲ್ಲೂ ಶಿವಲಿಂಗ ಹುಡುಕುವ ಅಗತ್ಯವಿಲ್ಲ: ಮೋಹನ್‌ ಭಾಗವತ್‌

ನಾಗಪುರ: ಜ್ಞಾನವಾಪಿ ವಿವಾದವು ನಂಬಿಕೆಗೆ ಸಂಬಂಧಿಸಿದ ವಿಷಯವಾಗಿದೆ. ಈ ಬಗ್ಗೆ ನ್ಯಾಯಾಲಯದ ನಿರ್ಧಾರವನ್ನು ಎಲ್ಲರು ಒಪ್ಪಬೇಕು ಎಂದಿರುವ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್‌, ಪ್ರತಿಯೊಂದು ಮಸೀದಿಯಲ್ಲೂ ಶಿವಲಿಂಗವನ್ನು ಹುಡುಕುವ ಮತ್ತು ಹೊಸ ವಿವಾದ ಸೃಷ್ಟಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಆರ್‌ಎಸ್‌ಎಸ್‌ನ ಮೂರನೇ ಅಧಿಕಾರಿ ತರಬೇತಿ ಶಿಬಿರದ ಸಮಾರೋಪದಲ್ಲಿ ಮಾತನಾಡಿದ ಅವರು, ಅಯೋಧ್ಯೆ ಆಂದೋಲನದಲ್ಲಿ ಭಾಗವಹಿಸಿದ್ದು ಒಂದು ಅಪವಾದವಾಗಿದೆ. ಭವಿಷ್ಯದಲ್ಲಿ ಇಂತಹ ಆಂದೋಲನಗಳನ್ನು ಕೈಗೊಳ್ಳುವುದಿಲ್ಲ ಎಂದು ಆರ್‌ಎಸ್‌ಎಸ್‌ ಈಗಾಗಲೇ ಸ್ಪಷ್ಟಪಡಿಸಿದೆ. ಈಗ ವಾರಾಣಾಸಿಯಲ್ಲಿರುವ ಜ್ಞಾನವಾಪಿ ಮಸೀದಿ ಕುರಿತು ಚರ್ಚೆ ನಡೆಯುತ್ತಿದೆ ಎಂದರು.

ಇತಿಹಾಸವನ್ನು ತಿರುಚಲು ಸಾಧ್ಯವಿಲ್ಲ. ಈಗಿನ ಹಿಂದೂಗಳು ಮತ್ತು ಮುಸ್ಲಿಂರು ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಿಲ್ಲ. ಮುಸ್ಲಿಂ ಆಕ್ರಮಣಕಾರರು ಭಾರತಕ್ಕೆ ಆಗಮಿಸಿದ ವೇಳೆ ಇವೆಲ್ಲವು ಸಂಭವಿಸಿದವು. ಆಕ್ರಮಣಕಾರರು ಸ್ವಾತಂತ್ರ್ಯ ಬಯಸುವ ಜನರ ಆತ್ಮಸ್ಥೈರ್ಯ ಕುಂದಿಸಲು ದೇಗುಲಗಳನ್ನು ಧ್ವಂಸಗೊಳಿಸಿದರು. ಇಂತಹ ಸಾವಿರಾರು ದೇವಸ್ಥಾನಗಳಿವೆ. ಈ ಬಗ್ಗೆ ಸಂಘವು ಯಾವುದೇ ಪ್ರತಿಕ್ರಿಯಿಸಲು ಇಚ್ಛಿಸುವುದಿಲ್ಲ ಎಂದು ತಿಳಿಸಿದರು.

Exit mobile version