Site icon PowerTV

ಕಾಂಗ್ರೆಸ್​ಗೆ ಭಗತ್ ಸಿಂಗ್ ಮೇಲೆ ಲವ್ ಆಗಿದೆ : ಸಂಸದ ಪ್ರತಾಪ್ ಸಿಂಹ

ಹಾಸನ : ಕಾಂಗ್ರೆಸ್​​ನವರಿಗೆ ಭಗತ್ ಸಿಂಗ್ ಬಗ್ಗೆ ಲವ್ ಅಂಡ್ ಅಫೆಕ್ಷನ್ ಶುರುವಾಯಿತೋ ಗೊತ್ತಿಲ್ಲ. ಇದ್ದಕ್ಕಿದ್ದಂತೆ ಅವರ ಬಗ್ಗೆ ಸಿದ್ದರಾಮಯ್ಯ ಬಾಯಲ್ಲಿ ಮಾತು ಬರುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಸಂಸದ ಪ್ರತಾಪ್ ಸಿಂಹ ಹರಿಹಾಯ್ದಿದ್ದಾರೆ.

ಇಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು, ಭಗತ್ ಸಿಂಗ್, ಟಿಪ್ಪು ಬಗ್ಗೆ ಕಾಂಗ್ರೆಸ್​​ ಪಕ್ಷದವರಿಗೆ ಪ್ರೀತಿ ಶುರುವಾಗಿದೆ ಅನಿಸುತ್ತದೆ. ಒಂದು ರಸ್ತೆಗಾಗಲಿ, ವಿಮಾನ ನಿಲ್ದಾಣಕ್ಕಾಗಲೀ, ನೈರ್ಮಲ್ಯ ಕಾರ್ಯಕ್ರಮ ಎಲ್ಲದಕ್ಕೂ ರಾಜೀವ್ ಗಾಂಧಿ ಇಂಧಿರಾಗಾಂಧಿ ಬಿಟ್ಟು ಬೇರೆಯವರು ನೆನಪಾಗಲ್ಲ. ಕೆಲವೊಮ್ಮೆ ನಾಮಕಾವಸ್ತೆಗೆ ಸ್ವಲ್ಪ ಗಾಂಧೀಜಿ ನೆನಪಾಗ್ತಾರೆ. ಆದರೆ, ಇದ್ದಕ್ಕಿದ್ದಂತೆ ಭಗತ್ ಸಿಂಗ್ ಬಗ್ಗೆ ಸಿದ್ದರಾಮಯ್ಯ ಬಾಯಲ್ಲಿ ಮಾತುಗಳು ಬರುತ್ತಿದೆ, ಇದು ನನಗೆ ಸೋಜಿಗೆ ಅನ್ನಿಸುತ್ತಿದೆ ಎಂದು ವ್ಯಂಗ್ಯವಾಡಿದರು.

ಅಷ್ಟೆ ಅಲ್ಲದೇ ಅವರ ಐದು ವರ್ಷದ ಆಡಳಿತಾವಧಿಯಲ್ಲಿ ಅವರು ಟಿಪ್ಪು, ಹೈದರಾಲಿ ಇವರ ಬಗ್ಗೆ ಮಾತೇ ಆಡಿಲ್ಲ. ಅವರ ಬಗ್ಗೆ ಪ್ರೀತಿ ಬರಲಿ ಆದ್ರೆ ಯಾಕೆ ಸುಳ್ಳು ‌ಹೇಳ್ತೀರಿ? ಪಠ್ಯದಲ್ಲಿ ಭಗತ್ ಸಿಂಗ್ ವಿಷಯವನ್ನ ಯತಾವತ್ತಾಗಿ ಅಳವಡಿಸಲಾಗಿದೆ. ನಾರಾಯಣ್ ಗುರುಗಳ ವಿಷಯವನ್ನ ಇತಿಹಾಸದ ಬದಲಾಗಿ ಕನ್ನಡ ವಿಷಯಕ್ಕೆ ಸೇರಿಸಲಾಗಿದೆ. ಆದರೆ, ವಿನಾಕಾರಣವಾಗಿ ಕೆಲವರು ಹುಯಿಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ಇನ್ನು ಭಗತ್‌‌ ಸಿಂಗ್‌‌, ರಾಜಗುರು ಸುಖದೇವ್​​ಗೆ ಗಲ್ಲು ಹಾಕುತ್ತಿರುವ ಸಂದರ್ಭದಲ್ಲಿ ಗಾಂಧೀಜಿ ದುಂಡು ಮೇಜಿನ ಸಭೆಗೆ ಇಂಗ್ಲೆಂಡ್​​ಗೆ ಹೊರಟಿದ್ದರು. ಇಡೀ ದೇಶದ ಜನ ಈ ಮೂವರ ಗಲ್ಲು ಶಿಕ್ಷೆ ಪರವಾಗಿ ಚರ್ಚಿಸುವಂತೆ ಮನವಿ ಮಾಡಿದರು. ಆದ್ರೆ ಆಗ ಏಕೆ ಕಾಂಗ್ರೆಸ್ ಈ ವಿಷಯ ಚರ್ಚಿಸಲಿಲ್ಲ‌ ಎಂದು ಪ್ರಶ್ನೆ ಮಾಡಿದ್ದಾರೆ. ಇದು ಕಾಂಗ್ರೆಸ್​​ನವರ ನಿಜವಾದ ರೂಪ. ಅವರಿಗೆ ಇಂದಿರಾಗಾಂಧಿ ರಾಜೀವ್‌ಗಾಂಧಿ, ನೆಹರು ಬಿಟ್ರೆ ಯಾರು ಕಾಣಿಸಲ್ಲ. ಇವರು ಸುಮ್ಮನೇ ಬಿಜೆಪಿ ಬಗ್ಗೆ ಅವಹೇಳನ ಮಾಡಲು ಈ ರೀತಿ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Exit mobile version