Site icon PowerTV

ಬೆಂಗಳೂರಿನಲ್ಲಿ ಬೀದಿಗಿಳಿದ ಪಿಂಕ್ ನಾರಿಯರು..!

ಬೆಂಗಳೂರು: ರಾಜಧಾನಿಯಲ್ಲಿ ಪಿಂಕ್ ಕಹಳೆ ಮೊಳಗಿತು. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಾವಿರಾರು ಆಶಾಕಾರ್ಯಕರ್ತೆಯರು ಫ್ರೀಡಂ ಪಾರ್ಕ್‌ನಲ್ಲಿ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿದ್ರು. AIUTUC ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಜ್ಯದ 31 ಜಿಲ್ಲೆಗಳಿಂದ ಆಗಮಿಸಿದ ಸುಮಾರು 5 ಸಾವಿರಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಬಂದಿದ್ದರು.

ಆಶಾ ಕಾರ್ಯಕರ್ತೆಯರ ಬೇಡಿಕೆಗಳೇನು..?

ಸರ್ಕಾರಿ ನೌಕರರೆಂದು ಪರಿಗಣಿಸಬೇಕು
ಪ್ರೋತ್ಸಾಹ ಧನ ಹೆಚ್ಚಿಸಬೇಕು
ಕೊರೋನಾಗೆ ಬಲಿಯಾದವರಿಗೆ 50 ಲಕ್ಷ ಪರಿಹಾರ
ವೇತನ, ಮುಂಬಡ್ತಿ, ನಿವೃತ್ತಿ ವೇತನ, ಇಪಿಎಫ್, ಇಎಸ್ಐ ಬೇಕು
ನಿಗದಿತ 36 ಇಲಾಖೆಗಳಲ್ಲಿ ಮಾತ್ರ ಕೆಲಸ ಮಾಡಿಸಬೇಕು
ಪ್ರೋತ್ಸಾಹ, ಗೌರವ ಧನ ಒಗ್ಗೂಡಿಸಿ ಮಾಸಿಕ ವೇತನ ನೀಡಿ
ರಾಜ್ಯದಲ್ಲಿ ಆಂಧ್ರ ಮಾದರಿಯನ್ನು ಜಾರಿಗೆ ತರಬೇಕು

ಈ ಹೋರಾಟಕ್ಕೆ ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಅವರ ಬೆಂಬಲ ಸಿಕ್ಕಿದ್ದು, ಆನೆ ಬಲ ಬಂದಂತಾಯ್ತು. ನಿಮ್ಮ ಹೋರಾಟದಲ್ಲಿ ನಾನು ಭಾಗಿಯಾಗ್ತಿದೇನೆ, ನಿಮ್ಮೊಂದಿಗೆ ನಾನು ಇರ್ತೇನೆ ಎಂದು ಭರವಸೆ ನೀಡಿದ್ರು. ಇನ್ನು ಎಸ್. ಆರ್ ಹಿರೇಮಠ್‌ ಕೂಡ ಆಶಾ ಕಾರ್ಯಕರ್ತೆಯರ ಪರ ನಿಂತರು.

ಇನ್ನು ಮಳೆ ಬಂದ್ರೂ ಕೂಡ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಿಲ್ಲಿಸಿಲ್ಲ. ಮಳೆಯ ನಡುವೆಯೇ ತಮ್ಮ ಬೇಡಿಕೆಗಳನ್ನು ಈಡೇರಿಸಲು ಅಂತ ಒತ್ತಾಯಿಸಿದರು.ಇನ್ನು ಪ್ರತಿಭಟನೆಯ ಕಾವು ಜೋರಾಗುತ್ತಿದ್ದಂತೆ ಇಲಾಖೆಯ ಆಯುಕ್ತ ರಣಧೀರ ಕಾರ್ಯಕರ್ತರೊಂದಿಗೆ ಚರ್ಚೆ ಮಾಡಿದರು. ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ಶುಕ್ರವಾರ ಸಭೆಯನ್ನು ಕರೆದರು. ಶುಕ್ರವಾರ ಸಭೆ ನಿಗದಿಯಾಗ್ತಿದ್ದಂತೆ ಆಶಾ ಕಾರ್ಯಕರ್ತೆಯರು ಪ್ರತಿಭಟನೆಯನ್ನು ಕೈಬಿಟ್ಟು ತಮ್ಮ ಊರುಗಳತ್ತ ಮುಖಮಾಡಿದ್ರು. ಶುಕ್ರವಾರ ರಂದೀಪ್ ನೇತೃತ್ವದ ಸಭೆ ಬಳಿಕ ಮುಂದಿನ ಹೋರಾಟದ ಬಗ್ಗೆ AIUTUC ನಿರ್ಧಾರ ಮಾಡಲಿದ್ದು ಸಭೆಯಲ್ಲಿ ಒಮ್ಮತದ ನಿರ್ಧಾರ ವ್ಯಕ್ತವಾಗದಿದ್ರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ ಪಿಂಕ್ ನಾರಿಯರು.

Exit mobile version