Site icon PowerTV

ಐವರು ಪೊಲೀಸರ ಮೇಲೆ ದುಷ್ಕರ್ಮಿಗಳು ಹಲ್ಲೆ

ಚಾಮರಾಜನಗರ : ಆರೋಪಿಯನ್ನು ಬಂಧಿಸಲು ತೆರಳಿದ್ದ ವೇಳೆ ಪಿಎಸ್ಐ ಸೇರಿದಂತೆ ಐವರು ಪೊಲೀಸರ ಮೇಲೆ ಗುಂಪು ಹಲ್ಲೆ ನಡೆಸಿರುವ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ‌ಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಸಮೀಪದ ಒಣಕನಪುರ ಗ್ರಾಮದಲ್ಲಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ. ಜಾತಿ ನಿಂದನೆ ಕೇಸಿನ ಆರೋಪಿ ಸಿದ್ದರಾಜು ಎಂಬಾತನನ್ನು ಬಂಧಿಸಲು ತೆರಳಿದ್ದ ಬೇಗೂರು ಪಿಎಸ್ಐ ರಿಹಾನಾಬೇಗಂ, ಎಎಸ್ಐ ನಾಗರಾಜು, ಕಾನ್ಸ್‌ಟೇಬಲ್​ಗಳಾದ ಗಣೇಶ್, ನಾಗೇಂದ್ರ ಹಾಗೂ ನಾಗೇಶ್ ಎಂಬವರನ್ನು ಆರೋಪಿ ಸಂಬಂಧಿಕರು, ಸುತ್ತಮುತ್ತಲಿನ ಮನೆಯವರು ಎಳೆದಾಡಿ, ಬೈದು ತೀವ್ರ ಹಲ್ಲೆ ನಡೆಸಿ ಆರೋಪಿಯನ್ನು ತಪ್ಪಿಸಿಕೊಳ್ಳುವಂತೆ ಮಾಡಿದ್ದಾರೆ.

ಸದ್ಯ ಪಿಎಸ್ಐ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ‌ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕಳುಹಿಸಲಾಗಿದೆ. ಆರೋಪಿ ಹಾಗೂ ಕುಟುಂಬಸ್ಥರ‌ ವಿರುದ್ಧ ಹಲ್ಲೆ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪ್ರಕರಣ ದಾಖಲಾಗಿದೆ. ಇನ್ನು ಸ್ಥಳಕ್ಕೆ ಡಿವೈಎಸ್ಪಿ ಪ್ರಿಯಾದರ್ಶಿನಿ ಹಾಗೂ ಸರ್ಕಲ್ ಇನ್ಸ್​ಪೆಕ್ಟರ್ ಸೇರಿದಂತೆ ಹೆಚ್ಚಿನ ಪೊಲೀಸರು‌ ಭೇಟಿ ನೀಡಿ‌ ಹಲ್ಲೆ ಮಾಡಿದ ಗುಂಪಿನ 13 ಜನರನ್ನ ಬಂಧಿಸಿ ಗ್ರಾಮದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಜಿಲ್ಲೆಯಲ್ಲಿ ಈವರೆಗೆ ಯಾವುದೇ ಪೊಲೀಸ್​ ಅಧಿಕಾರಿಗಳ ಮೇಲೆ ಹಲ್ಲೆ ನಡೆದ ಘಟನೆಯ ನಡೆದಿರಲ್ಲಿಲ್ಲ, ಇದೇ ಮೊದಲ ಪ್ರಕರಣವಾಗಿದೆ.

Exit mobile version