ಬಾಗಲಕೋಟೆ : ಮಾಜಿ ಸಿಎಂ ಸಿದ್ದರಾಮಯ್ಯ ಎಲ್ಲಿಗೆ ಹೋದರು ಅಲ್ಲಿ ವಿರೋಧವೇ ಇರುತ್ತದೆ ಸಿದ್ದರಾಮಯ್ಯನವರ ಪರ ಯಾರು ಇರಲ್ಲ, ಅವರಿಗೆ ವಿರೋಧವೇ ಹೆಚ್ಚು ಎಂದು ಸಾರಿಗೆ ಸಚಿವ ಬಿ.ಶ್ರೀರಾಮಲು ಹೇಳಿದ್ದಾರೆ.
ಬಾಗಲಕೋಟೆ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಯಾರ ಜೊತೆಗೂ ನಂಬಿಕಸ್ತರಾಗಿಲ್ಲ. ಅವರಿಗೆ ಅಧಿಕಾರಬೇಕು, ಅವತ್ತು ಚಿಮ್ಮನಕಟ್ಟಿ, ಎಸ್ ಆರ್ ಪಾಟೀಲ್ ಬೇಕಿದ್ದರು, ಪಾಪ ಅವರನ್ನ ಬಳಸಿಕೊಂಡರು. ಇವತ್ತು ಗಾಳಿಗೆ ತೂರಿ ಬಿಟ್ಟರು ಎಂದು ವ್ಯಂಗ್ಯವಾಡಿದರು.
ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ಪರ ಬ್ಯಾಟಿಂಗ್ ಮಾಡಿದ ಶ್ರೀರಾಮುಲು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಯ ಎಲ್ಲ ನಾಯಕರನ್ನ ಮುಗಿಸುವ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯ ಜನರು ಯಾವತ್ತು ಎದ್ದು ನಿಲ್ತಾರೋ ಗೊತ್ತಿಲ್ಲ. ಪಕ್ಷ ಬಿಟ್ಟು ತೊಲಗಬೇಕು ಅನ್ನೋ ಪರಿಸ್ಥಿತಿ ಸಿದ್ದರಾಮಯ್ಯನವರಿಗೆ ಬರಬಹುದು. ಜಿಲ್ಲೆಯಲ್ಲಿ ಕಾಂಗ್ರೆಸ್ ಉಳಿದಿದ್ದರೆ ಅದಕ್ಕೆ ಎಸ್ ಆರ್ ಪಾಟೀಲ್ ಕಾರಣ. ಅವರಿಗೆ ಟಿಕೆಟ್ ಸಿಗದಂತೆ ಷಡ್ಯಂತ್ರ ಮಾಡಿದ್ದು ಸಿದ್ದರಾಮಯ್ಯ. ಮತ್ತೊಂದು ಕಡೆ ಚಿಮ್ಮನಕಟ್ಟಿ ಅವರನ್ನ ಕಾಂಗ್ರೆಸ್ ಪಕ್ಷದಿಂದ ಹೊರಗೆ ಕಳಿಸುವ ಕೆಲಸ ಮಾಡ್ತಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಇನ್ನು ಮುಂದೆ ಇಲ್ಲಿ ನಿಲ್ಲೋದು ಬೇಡ ಅಂತ ಚಿಮ್ಮನಕಟ್ಟಿ ಹೇಳಿದ್ದನ್ನು ಮಾಧ್ಯಮದಲ್ಲಿ ನೋಡಿದ್ದೇನೆ. ಈ ಜಿಲ್ಲೆಗೆ ಅನ್ಯಾಯ ಮಾಡುವ ಕೆಲಸ ಮಾಡಿದ್ದಾರೆ. ಬನಶಂಕರಿ ತಾಯಿ ಕೂಡ ಇಲ್ಲಿ ಅವರಿಗೆ ಮನೆಗೆ ಕಳಿಸುತ್ತಾರೆ ಅಂತ ತಿಳಿದಿದ್ದೀವಿ. ಆದರೆ ಬೇರೆ ಬೇರೆ ಕಾರಣದಿಂದ ಇಲ್ಲಿ ಗೆದ್ದು, ಜನರ ಕೈಗೆ ಸಿಗದ ವಸ್ತುವಾಗಿದ್ದಾರೆ. ನನಗೆ ಮಾತನಾಡೋಕೆ ಬರುತ್ತೆ ಅಂತ ಯಾರಿಗೆ ಬೇಕಾದರೂ ಏಕವಚನದಲ್ಲಿ ಮಾತನಾಡಿ, ಟೀಕೆ ಮಾಡ್ತೀನಿ, ನನಗೆ ಯಾರು ಸಾಟಿಯಿಲ್ಲ, ನಾನು ಮಾತನಾಡಿದ್ದೆ ವೇದವಾಕ್ಯ ಅಂತ ತಿಳಿದ್ದಿದ್ದಾರೆ. ಈಗಾಗಲೇ ಸಿದ್ದರಾಮಯ್ಯಗೆ ವಿರೋಧ ವ್ಯಕ್ತವಾಗುತ್ತಿದೆ. ಶೀಘ್ರದಲ್ಲೇ ಜಿಲ್ಲೆಯನ್ನ ಬಿಡಬೇಕು ಅಂತ ಪ್ರತಿಭಟನೆ ಕೂಡ ಆಗಬಹುದು ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಮತ್ತೆ ಬಾದಾಮಿ ಕ್ಷೇತ್ರದಿಂದ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಅವರು, ನೋಡೋಣಾ ಅದು ಪಾರ್ಟಿ ನಿರ್ಧಾರ. ರಾಜಕಾರಣದಲ್ಲಿ ನಾನು ಯಾವುದನ್ನು ಅಂದುಕೊಳ್ಳಲ್ಲ. ಬಿಜೆಪಿ ಪಾರ್ಟಿಯಲ್ಲಿ ನಾನೊಬ್ಬ ಶಿಸ್ತಿನ ಸಿಪಾಯಿ. ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧ. ಪಕ್ಷ ಹೇಳಿದ್ರೆ ನಾ ರೆಡಿ, ನಾವು ಸೊಲ್ಜರರ್ಸ್ ಇದ್ದಂಗೆ ಎಸ್ ಅಂದ್ರೆ ಬ್ಯಾಗ್ ಎತ್ತಿಕೊಂಡು ಹೋಗೊದೆ. ಪಾರ್ಟಿ ತೀರ್ಮಾಣಕ್ಕೆ ನಾವು ಬದ್ಧವಾಗಿದ್ದೇವೆ ಎಂದರು.
ಅಲ್ಲದೇ ಮತಾಂತರ ಕಾಯ್ದೆ ಜಾರಿ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಒಬ್ಬ ಭಂಡ.. ಡಬಲ್ ಸ್ಟ್ಯಾಂಡರ್ಡ್ ವ್ಯಕ್ತಿ ಎಂದು ಕಿಡಿ ಕಾರಿದರು. ಈ ಹಿಂದೆ ಅದೇ ಮಸೂದೆಗೆ ಸಹಿ ಹಾಕಿದ್ದೇ ಸಿದ್ದರಾಮಯ್ಯ ಅವರು, ಈಗ ಸಹಿ ಮಾಡಿಲ್ಲ ಅಂತ ಹೇಳಿ, ಮಾಡಿದ್ದೀನಿ ಏನು ಮಾಡ್ತೀರಿ ಅಂತಾರೆ ? ನಾವೇನು ಅವರೊಂದಿಗೆ ಜಗಳಾ ಮಾಡ್ತೀವಾ. ಹೀಗಾಗಿ ಬೇಕಾಬಿಟ್ಟಿ ಮಾತನಾಡೋ ಸಿದ್ದರಾಮಯ್ಯ ಅವರು ಒಬ್ಬ ಭಂಡ ವ್ಯಕ್ತಿ ಎಂದು ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದರು.


