ಹಾಸನ : ಬೇಲೂರು ತಾಲೂಕಿನ ಯಲಹಂಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಜ್ಜೇನಹಳ್ಳಿ ಗ್ರಾಮದಲ್ಲಿ 500ಕ್ಕೂ ಹೆಚ್ಚು ಅಡಕೆ ಗಿಡಗಳನ್ನು ದುಷ್ಕರ್ಮಿಗಳು ಕಡಿದಿದ್ದಾರೆ. ಗ್ರಾಮದ ಕಮಲಮ್ಮ ವೀರಲಿಂಗೇಗೌಡ ಅವರು 1 ಎಕರೆಯಲ್ಲಿ 500ಕ್ಕೂ ಹೆಚ್ಚು ಅಡಕೆ ಗಿಡಗಳನ್ನು ಬೆಳೆಸಿದ್ದು, ಗುರುವಾರ ರಾತ್ರಿ ದುಷ್ಕರ್ಮಿಗಳು ಎಲ್ಲ ಗಿಡಗಳನ್ನು ಕಡಿದು ಹಾಕಿದ್ದಾರೆ.
ಆರು ವರ್ಷಗಳಿಂದ ಬಿಸಿಲು, ಮಳೆ ಲೆಕ್ಕಿಸದೆ ಕುಟುಂಬ ಸದಸ್ಯರು ಬೆವರು ಸುರಿಸಿ ಕಾಪಾಡಿ ಕೊಂಡು ಬಂದಿದ್ದ ನೂರಾರು ಅಡಕೆ ಸಸಿಗಳನ್ನು ಕಿಡಿಗೇಡಿಗಳು ಕಡಿದು ನೆಲಸಮ ಮಾಡಿರುವುದನ್ನು ಕಂಡು ಕಮಲಮ್ಮ ಕುಟುಂಬ ಕಣ್ಣೀರಿಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಘಟನೆ ಕುರಿತಂತೆ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ತಹಸೀಲ್ದಾರ್ ಮೋಹನ್ ಕುಮಾರ್, ಹಳೇಬೀಡು ಪೊಲೀಸ್ ಠಾಣೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಕಿಡಿಗೇಡಿಗಳಿಗಾಗಿ ಬಲೆ ಬೀಸಿದ್ದಾರೆ.

ಇನ್ನೊಂದಷ್ಟು ವರ್ಷ ಕಾಪಾಡಿಕೊಂಡಿದ್ದರೆ ಫಸಲು ನೀಡುತ್ತಿದ್ದವು. ಕಷ್ಟಪಟ್ಟು ಬೆಳೆಸಿದ್ದ ಅಡಕೆ ಗಿಡಗಳು ನೆಲಸಮವಾಗಿವೆ ಎಂದು ಕುಟುಂಬ ಅಧಿಕಾರಿಗಳ ಎದುರು ಕಣ್ಣೀರು ಇಟ್ಟಿತು. ತಕ್ಷಣವೇ ತಾಲೂಕು ಹಾಗೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ರೈತರ ಬೆಳೆಗಳನ್ನು ನಾಶಪಡಿಸುತ್ತಿರುವ ಕಿಡಿಗೇಡಿಗಳ ಬಂಧಿಸಿ ಕ್ರಮಕ್ಕೆ ಮುಂದಾಗಿ, ರೈತರಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಜಮೀನಿನ ಮಾಲೀಕರು, ಗ್ರಾಮಸ್ಥರು ಒತ್ತಾಯಿಸಿದ್ದಾರೆ.


