Monday, August 25, 2025
Google search engine
HomeUncategorizedಮತದಾರರ ಓಲೈಕೆಗೆ ಕದನ ಕಲಿಗಳ ಕಸರತ್ತು

ಮತದಾರರ ಓಲೈಕೆಗೆ ಕದನ ಕಲಿಗಳ ಕಸರತ್ತು

ಮುದ್ರಣ ಕಾಶಿ ಗದಗ-ಬೆಟಗೇರಿ ನಗರಸಭೆ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಮತದಾರರ ಮನವೊಲಿಸಲು ಕದನ ಕಲಿಗಳು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ಪ್ರಧಾನಿ ಮೋದಿ ಕಾರ್ಯವೈಖರಿ ಮೆಚ್ಚಿ ಆಡಳಿತ ಪಕ್ಷದಿಂದ ಸ್ಪರ್ಧಿಸಿರುವ 11 ನೇ ವಾರ್ಡಿನ ಅಭ್ಯರ್ಥಿ ಶ್ವೇತಾ ದಂಡಿನ ವಾರ್ಡ್‌ನೆಲ್ಲೆಡೆ ಮಿಂಚಿನ ಸಂಚಾರ ನಡೆಸಿ ಜನಮನ್ನಣೆ ಗಳಿಸುತ್ತಿದ್ದಾರೆ.

ಹೌದು, ಗದಗ-ಬೆಟಗೇರಿ ಅವಳಿ ನಗರದಲ್ಲಿ ನಗರಸಭೆ ಚುನಾವಣೆ ಕಣ ಕಾವೇರಿದೆ. ಬರೋಬ್ಬರಿ ಎಂಟು ವರ್ಷಗಳ ಬಳಿಕ ಅವಳಿ ನಗರದಲ್ಲಿ ಚುನಾವಣೆ ಅಖಾಡ ರಂಗೇರಿದೆ. 2018ರಲ್ಲೇ ನಗರಸಭೆ ಆಡಳಿತ ಅವಧಿ ಮುಕ್ತಾಯವಾಗಿದ್ದರೂ, ನಾನಾ ಕಾರಣಗಳಿಂದ ಚುನಾವಣೆ ಮುಂದೂಡಲಾಗಿತ್ತು. ಆದರೆ, ಇದೀಗ ತಡವಾಗಿ ನಗರಸಭೆಗೆ ಚುನಾವಣೆ ನಡೆಯುತ್ತಿದ್ದು, ದಿನದಿಂದ ದಿನಕ್ಕೆ ಕದನ ಕಣ ರಂಗೇರುತ್ತಿದೆ.

ಇದೇ 27 ರಂದು ಗದಗ-ಬೆಟಗೇರಿ ನಗರಸಭೆ ಚುನಾವಣೆ ನಡೆಯುತ್ತಿದ್ದು, 11 ನೇ ವಾರ್ಡಿನ ಸಮಸ್ಯೆಗಳಿಂದ ರೋಸಿ ಹೋಗಿರುವ ಮತದಾರರು ತಮ್ಮದೇ ವಾರ್ಡಿನ ಬಿಎಸ್‌ಸಿ ಪದವೀಧರೆ, ಎಬಿವಿಪಿ ಹೋರಾಟಗಾರ್ತಿ ಶ್ವೇತಾ ದಂಡಿನ್ ಅವರನ್ನು ಕಣಕ್ಕಿಳಿಸಿದ್ದಾರೆ. ಪ್ರಧಾನಿ ಮೋದಿಯವರ ಕಾರ್ಯವೈಖರಿಯಿಂದ ಪ್ರೇರಿತರಾಗಿರುವ ಶ್ವೇತಾ ಅವರು, ವಾರ್ಡ್ ಹಾಗೂ ಗದಗ-ಬೆಟಗೇರಿ ನಗರಸಭೆ ಅಭಿವೃದ್ಧಿ ಮಾಡುವ ಮಹತ್ವದ ಕನಸನ್ನು ಕಂಡಿದ್ದಾರೆ. ಕಾಲೇಜು ದಿನಗಳಿಂದಲೇ ಎಬಿವಿಪಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ವಿದ್ಯಾರ್ಥಿಗಳ ಜ್ವಲಂತ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ್ದಾರೆ.

ಅಕ್ಷರ ದಾಸೋಹಕ್ಕೆ ಉತ್ತರ ಕರ್ನಾಟಕದಲ್ಲಿಯೇ ಹೆಸರಾದ ಸುಮಾರು 56 ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ದಂಡಿನ್ ಕುಟುಂಬದ ಮನೆಮಗಳು ಶ್ವೇತಾ. ಇವರ ತಾತ B.F.ದಂಡಿನ್ ಶೈಕ್ಷಣಿಕ ಸೇವೆಯನ್ನೇ ಜೀವನದ ಮೂಲ ಧ್ಯೇಯವನ್ನಾಗಿ ಮಾಡಿಕೊಂಡಿದ್ದರು. ಈಗ ಗದಗ-ಬೇಟಗೇರಿ ನಗರಸಭೆ ಚುನಾವಣೆಯಲ್ಲಿ ಆಡಳಿತಾರೂಢ BJPಯಿಂದ 11 ನೇ ವಾರ್ಡಿನಲ್ಲಿ ಸ್ಪರ್ಧೆಗೆ ಇಳಿದಿರೋದು ಆಡಳಿತ ಪಕ್ಷಕ್ಕೆ ಸಂತೃಪ್ತಿ ತರಿಸಿದೆ.

ಇನ್ನು ಪ್ರಧಾನಿ ಮೋದಿಯವರ ಆಡಳಿತ ವೈಖರಿ ಮೆಚ್ಚಿ ರಾಜಕೀಯ ರಂಗಕ್ಕೆ ಪದಾರ್ಪಣೆ ಮಾಡಿರುವ ಶ್ವೇತಾ ದಂಡಿನ್, ವಾರ್ಡ್‌ನ್ನು ಪಾರಂಪರಿಕವಾಗಿ ಅಭಿವೃದ್ಧಿಗೊಳಿಸುವ ಮಹತ್ವದ ಕನಸನ್ನು ಹೊತ್ತು ಚುನಾವಣೆ ಕಣಕ್ಕೆ ಇಳಿದಿದ್ದಾರಂತೆ.

ಒಟ್ಟಿನಲ್ಲಿ ಗದಗ-ಬೆಟಗೇರಿ ಚುನಾವಣೆಗೆ ಕೆಲವೇ ದಿನ ಬಾಕಿ ಇದ್ದು, ಮತದಾರರ ಮನವೊಲಿಕೆಗೆ ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ವಿದ್ಯಾವಂತೆ ಅಭ್ಯರ್ಥಿ ಶ್ವೇತಾ ದಂಡಿನ್ ಅವರಿಗೆ ವಾರ್ಡಿನೆಲ್ಲೆಡೆಯೂ ವ್ಯಾಪಕ ಜನಬೆಂಬಲ ವ್ಯಕ್ತವಾಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments