ಮುಳುಗಿದ ಶೆಟ್ಟಿಹಳ್ಳಿ ಚರ್ಚ್..!

ಹಾಸನ : ಜಿಲ್ಲೆಯ ಜೀವನದಿ ಹಾಗೂ ಕಾವೇರಿ ಕೊಳ್ಳದ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹೇಮಾವತಿ ಜಲಾಶಯ, ವಾರದ ಅಂತರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಈ ಬಾರಿಯೂ ಭರ್ತಿ ಭಾಗ್ಯ ಕಂಡಿದೆ. ಇದರಿಂದ ಹೇಮೆಯನ್ನು ನಂಬಿದ್ದ ಲಕ್ಷಾಂತರ ಜನರ ಮೊಗದಲ್ಲಿ ಸಹಜವಾಗಿಯೇ ಮಂದಹಾಸ ಮೂಡಿದೆ. ಕಳೆದ ವರ್ಷ ಆಗಸ್ಟ್ 10 ರ ನಂತರ ಹೇಮಾವತಿ ಒಡಲು ತುಂಬಿಕೊಂಡು ಸಂಭ್ರಮಿಸಿದ್ದಳು. ಈ ಬಾರಿ ಅದಕ್ಕೂ ಮುನ್ನವೇ 37.103 ಟಿಎಂಸಿ ನೀರು ಸಂಗ್ರಹ ಸಾಮಥ್ರ್ಯದ ಜಲಾಶಯ ಒಡಲು ತುಂಬಿಕೊಂಡು ತನ್ನನ್ನೇ ನಂಬಿರುವ ಜನರಲ್ಲಿ ಹೊಸ ಆಶಾಭಾವ ಮೂಡಿಸಿದ್ದಾಳೆ. 2018 ರಲ್ಲೂ ಮಲೆನಾಡು ಭಾಗದಲ್ಲಿ ಜೋರು ಮಳೆಯಾಗಿದ್ದರಿಂದ ಹೇಮಾವತಿ ಜಲಾಶಯ ಜುಲೈ ತಿಂಗಳಲ್ಲೇ ಭರ್ತಿಯಾಗಿತ್ತು. ಒಟ್ಟಾರೆಯಾಗಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಹೇಮಾವತಿ ಪ್ರತಿ ವರ್ಷವೂ ಒಡಲು ತುಂಬಿಕೊಳ್ಳುತ್ತಿರುವುದು ಮುಖ್ಯವಾಗಿ ಅನ್ನದಾತ ಹಾಗೂ ಕುಡಿಯಲು ಆಶ್ರಯಿಸಿದ್ದ ಜನ-ಜಾನುವಾರುಗಳಲ್ಲಿ ನಿರುಮ್ಮಳ ಭಾವನೆ ಮೂಡಿದೆ.
ಮೂಡಿಗೆರೆ ಹಾಗೂ ಚಿಕ್ಕಮಗಳೂರು ಭಾಗದಲ್ಲಿ ಜೋರು ಮಳೆಯಾಗುತ್ತಿರುವುದರಿಂದ ಆ.7 ರಂದು ಜಲಾಶಯಕ್ಕೆ 47,320 ಕ್ಯೂಸೆಕ್ ನೀರು ಹರಿದು ಬರುತ್ತಿತ್ತು. ಶನಿವಾರವೂ ಮಳೆಯಾಟ ಜೋರಾಗಿರುವುದರಿಂದ ಇದೇ ಹೇಮೆಗೆ 50,036 ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಇದರಿಂದಾಗಿ 2922 ಅಡಿ ನೀರಿನ ಮಟ್ಟದ ಜಲಾಶಯದಲ್ಲಿ ಸದ್ಯದ ನೀರು ಸಂಗ್ರಹ ಮಟ್ಟ 2915.67 ಅಡಿಗೇರಿದೆ. ಒಟ್ಟಾರೆ 37.103 ಟಿಎಂಸಿ ನೀರು ಸಂಗ್ರಹ ಸಾಮಥ್ರ್ಯ ಡ್ಯಾಂ ನಲ್ಲಿ 31.25 ಟಿಎಂಸಿ ನೀರು ಸಂಗ್ರಹವಾಗಿದೆ.
ಜಲಾಶಯ ಭರ್ತಿಗೆ ಕೇವಲ ಆರೂವರೆ ಅಡಿ ನೀರು ಮಾತ್ರ ಹರಿದು ಬರಬೇಕಿದೆ. ಆದರೆ ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಶುಕ್ರವಾರ ರಾತ್ರಿಯಿಂದಲೇ 20 ಸಾವಿರ ಕ್ಯೂಸೆಕ್ ನೀರನ್ನು ಜಲಾಶಯದಿಂದ ಹರಿಯ ಬಿಡಲಾಗಿತ್ತು. ನಂತರ ಹೊರ ಹರಿವಿನ ಪ್ರಮಾಣವನ್ನು 10 ಸಾವಿರ ಕ್ಯೂಸೆಕ್‍ಗೆ ತಗ್ಗಿಸಲಾಯಿತು. ಹಾಲಿ ಜಲಾಶಯದ ಹೊರ ಹರಿವನ್ನು ನಿಲುಗಡೆ ಮಾಡಲಾಗಿದ್ದು, ಒಳ ಹರಿವಿನ ಪ್ರಮಾಣ ನೋಡಿಕೊಂಡು ಯಾವುದೇ ಸಂದರ್ಭದಲ್ಲಾದರೂ ಜಲಾಶಯದಿಂದ ನೀರನ್ನು ಹೊಗ ಬಿಡುವ ಸಾಧ್ಯತೆ ಇದೆ.

ಮತ್ತೆ ಮುಳುಗಿದ ಚರ್ಚ್:
ಹೇಮಾವತಿ ಜಲಾಶಯ ಈ ಬಾರಿಯೂ ಭರ್ತಿಯಾಗಿರುವುದರಿಂದ ಹಿನ್ನೀರಿನಲ್ಲಿರುವ ನೂರಾರು ವರ್ಷಗಳ ಹಳೆಯ ಕಾಲದ ಚರ್ಚ್ ಮತ್ತೆ ಬಹುತೇಕ ಮುಳುಗಡೆಯಾಗಿದೆ. ಹೇಮಾವತಿ ನದಿ ಪಾತ್ರದಲ್ಲಿ ಜೋರು ಮಳೆಯಾಗುತ್ತಿರುವುದರಿಂದ ನದಿಯಲ್ಲಿ ಒಳ ಹರಿವಿನ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. ಇದರಿಂದಾಗಿ ಪ್ರತಿ ವರ್ಷದಂತೆ ಈ ವರ್ಷವೂ ಶೆಟ್ಟಿಹಳ್ಳಿ ಚರ್ಚ್ ನೋಡುಗರಿಗೆ ಬೇರೆಯದೇ ರೀತಿಯಲ್ಲೇ ಭಾಸವಾಗುತ್ತಿದೆ.
ನೀರು ಇಲ್ಲದ ವೇಳೆ ಬೇರೆಯದೇ ರೀತಿಯಲ್ಲಿ ಕಾಣುವ ಚರ್ಚ್ ಈಗ ಜಲಶರಧಿಯ ಮಧ್ಯೆ ಬೋಟ್ ಇಲ್ಲವೇ ಮಾಸಲು ಬಣ್ಣದ ಹಡಗೊಂದು ಚಲಿಸುತ್ತಿರುವ ರೀತಿಯಲ್ಲಿ ಭಾಸವಾಗುತ್ತಿದೆ. ಒಂದೊಂದೆ ಮಳೆಯಾಟ ಮತ್ತೊಂದೆಡೆ ಜಲರಾಶಿಯಲ್ಲಿ ಮುಳುಗಿರುವ ಚರ್ಚ್‍ನ ಮೈಮಾಟ ಪ್ರವಾಸಿಗರಿಗೆ ಬೇರೆಯದೇ ರೀತಿಯ ಅನುಭವ ನೀಡುತ್ತಿದೆ. ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಹೇಮಾವತಿ ಜಲಾಶಯಕ್ಕೆ ಬರುವ ಪ್ರವಾಸಿಗರ ಆಗಮನಕ್ಕೆ ಜಿಲ್ಲಾ ಪೊಲೀಸ್ ಇಲಾಖೆ ನಿರ್ಬಂಧ ಹೇರಿದೆ. ಆದರೆ ಹಾಸನದಿಂದ ಶೆಟ್ಟಿಹಳ್ಳಿ ಮಾರ್ಗವಾಗಿ ಹೋಗುವ ರಸ್ತೆಯಲ್ಲಿ ಯಾವುದೇ ಅಡೆತಡೆ ಇಲ್ಲದೇ ಇರುವುದರಿಂದ ಈ ಮಾರ್ಗದಲ್ಲಿ ಸಂಚರಿಸುವ ಮಳೆ ಹಾಗೂ ಪರಿಸರ ಪ್ರಿಯರು ಸ್ವಚ್ಛಂದವಾಗಿ ಹೇಮೆ ಹಿನ್ನೀರು ಮತ್ತು ಶೆಟ್ಟಿಹಳ್ಳಿ ಚರ್ಚ್ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಮಳೆಯ ನಡುವೆಯೂ ಕೊಂಚ ಬಿಡುವು ಮಾಡಿಕೊಂಡು ಭೇಟಿ ನೀಡಿದರೆ ಒಳ್ಳೇ ಸನ್ನಿವೇಶವನ್ನೂ ಕಣ್ತುಂಬಿಕೊಳ್ಳಬಹುದಾಗಿದೆ.

RELATED ARTICLES

Related Articles

TRENDING ARTICLES