Site icon PowerTV

ಗರಿಗೆದರಿದ ಕೃಷಿ ಚಟುವಟಿಕೆ | ಜಾನಪದ ಹಾಡಿನ ಮೂಲಕ ಕೃಷಿ ಚಟುವಟಿಕೆ ಆರಂಭಿಸಿದ ಮಲೆನಾಡಿಗರು

ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂಗಾರು ಮಳೆ ಉತ್ತಮವಾಗಿ ಆಗುತ್ತಿದ್ದು, ಇದರ ನಡುವೆಯೇ ಜಿಲ್ಲೆಯ ಮಲೆನಾಡು ಹಾಗೂ ಬಯಲು ಸೀಮೆಯ ಭಾಗದಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರುತ್ತಿವೆ. ಮಲೆನಾಡು ಭಾಗದಲ್ಲಿ ಭತ್ತದ ನಾಟಿ ಭಿತ್ತುವ ಕಾರ್ಯ ಆರಂಭವಾಗಿದ್ದು, ಮೂಡಿಗೆರೆ ತಾಲೂಕಿನ ಬಣಕಲ್ ನ ಕೊಡೆಬೈಲ್ ನ ಮೋಹನ್ ಗೌಡ ಅವರ ಗದ್ದೆಯಲ್ಲಿ ಮಹಿಳೆಯರಿಂದ ವಿಶೇಷವಾಗಿ ನಾಟಿ ಕಾರ್ಯ ಮಾಡಿಸಲಾಗುತ್ತಿದೆ. ಈ ನಾಟಿ ಕೆಲಸಕ್ಕೆ ಆಗಮಿಸಿರುವ ಹತ್ತಾರು ಮಹಿಳೆಯರು ನಾಟಿ ಮಾಡುವ ಜೊತೆಗೆ ನಾಟಿಯ ಜನಪದ ಗೀತೆಗಳನ್ನು ಹಾಡುತ್ತಾ, ತಮ್ಮ ಕೆಲಸದಲ್ಲಿ ತೊಡಗಿದ್ದಾರೆ. ದಿನದ ಟೈಂ ಪಾಸ್ ಹಾಗೂ ಮನಸ್ಸಿನ ಉಲ್ಲಾಸಕ್ಕಾಗಿ ಈ ರೀತಿಯ ಪದ್ದತಿ ಈ ಹಿಂದಿನಿಂದಲೂ ನಾಟಿ ಮಾಡುವ ಮಹಿಳೆಯರು ಈ ಪದ್ದತಿಯನ್ನು ಪಾಲನೆ ಮಾಡಿಕೊಂಡು ಹೋಗುತ್ತಿದ್ದು, ಕೆಲಸ ಮಾಡುವ ವೇಳೆ ಹೆಚ್ಚು ಆಯಾಸವಾಗಬಾರದು, ಹಾಗೂ ಕೆಲಸ ಬೇಗ ಬೇಗ ಸಾಗಲಿ ಎಂಬ ಉದ್ದೇಶದಿಂದ ಈ ರೀತಿಯ ಹಾಡುಗಳನ್ನು ಹಾಡುತ್ತಿದ್ದು, ಈ ಹಾಡಿನಲ್ಲಿ ಜೀವನ ಪಾಠ ಕಥೆಗಳು ಹಾಗೂ ರಾಜ ಮಹಾರಾಜರ ಕಥೆಗಳನ್ನು ಹಾಡಿನ ರೂಪದಲ್ಲಿ ಹಾಡುವುದರ ಮೂಲಕ ತಮ್ಮ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಆದರೇ ಇತ್ತೀಚಿನ ದಿನಗಳಲ್ಲಿ ಯಂತ್ರೀಕರಣ ವ್ಯವಸಾಯ ಹೆಚ್ಚಾದ ಹಿನ್ನಲೆ ಈ ರೀತಿಯ ಪದ್ದತಿಗಳು ನೋಡುವುದೇ ಕಷ್ಟಕರವಾಗಿದ್ದು, ಅಲ್ಲೋ ಇಲ್ಲೋ ಎಂಬಂತೆ ಈ ರೀತಿಯ ಪದ್ದತಿಗಳನ್ನು ಇಂದಿಗೂ ಜೀವಂತಾಗಿ ಉಳಿಸಿ ಅದನ್ನು ಪಾಲಿಸಿಕೊಂಡು ಉಳಿಸಿ, ಬೆಳೆಸುವ ಕೆಲಸವನ್ನು ಕೆಲ ಮಹಿಳೆಯರು ಮಾಡುತ್ತಿದ್ದಾರೆ. ಇದು ಪುರಾತನ ವ್ಯವಸಾಯ ಪದ್ದತಿಯ ಸಂಸ್ಕೃತಿಯ ಉಳಿವಿನ ಸಾಕ್ಷಿಯಾಗಿದ್ದು, ಇದು ನಿಜಕ್ಕೂ ಮಲೆನಾಡು ಭಾಗದಲ್ಲಿ ಅತ್ಯಂತ ವಿಶೇಷವಾಗಿದೆ. ಇದನ್ನು ನಾಟಿ ಪದ ಅಥವಾ ಜನಪದ ಪದಗಳು ಅಂತಲೂ ಕರೆಯುತ್ತಾರೆ….

ಸಚಿನ್ ಶೆಟ್ಟಿ ಚಿಕ್ಕಮಗಳೂರು…

Exit mobile version