Site icon PowerTV

ಮುಂಡರಗಿ ಆದರ್ಶ ಶಾಲೆಯಲ್ಲಿ ನಿರುಪಯುಕ್ತ ಕೊಳವೆ ಬಾವಿ | ಅವಘಡವಾದ್ರೆ ಯಾರು ಹೊಣೆ?

ಗದಗ : ರಾಜ್ಯದಲ್ಲಿ ಈಗಾಗಲೇ ಕೊಳವೆ ಬಾವಿ ಪ್ರಕರಣಗಳು ಅದೆಷ್ಟೋ ಪುಟ್ಟ ಕಂದಮ್ಮಗಳನ್ನ ಬಲಿ ಪಡೆದಿವೆ. ಆದರೂ ಸಹ ಸಂಬಂಧಿಸಿದ ಇಲಾಖೆ, ಆಡಳಿತ ಮಂಡಳಿಗಳು ಇನ್ನೂ ಎಚ್ಚೆತ್ತುಕೊಂಡಿಲ್ಲ. ಇದೀಗ ಇಂಥದ್ದೆ ಒಂದು ಕೊಳವೆ ಬಾವಿ ಏನೂ ಅರಿಯದ ಮುಗ್ಧ ಕಂದಮ್ಮಗಳ ಬಲಿ ಪಡೆಯೋಕೆ ಬಾಯ್ತೆರೆದು ಕೂತಿದೆ. ಹೌದು.. ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ರಸ್ತೆಯಲ್ಲಿರೋ ಆದರ್ಶ ವಿದ್ಯಾಲಯದ ಶಾಲಾ ಆವರಣದಲ್ಲಿ ನಿರುಪಯುಕ್ತ ಕೊಳವೆ ಬಾವಿ ಬಾಯ್ತೆರೆದು ನಿಂತಿದೆ. ಸದ್ಯಕ್ಕೆನೋ ಕೊರೊನಾ ಲಾಕ್ಡೌನ್ ನಿಂದ ಶಾಲೆಗಳೆಲ್ಲವೂ ಬಂದ್ ಆಗಿವೆ. ಹೀಗಾಗಿ ವಿದ್ಯಾರ್ಥಿಗಳಂತೂ ಶಾಲೆ‌ ಬಳಿ ಸುಳಿಯೋದಿಲ್ಲ. ಆದರೆ ಮಕ್ಕಳಿಗೆ ರಜಾ‌ ದಿನವಾದ್ರಿಂದ ಪಕ್ಕದ‌ಲ್ಲಿರೋ ಗ್ರಾಮದ ಮಕ್ಕಳು‌ ಶಾಲೆ ಮುಂಭಾಗ ಮೈದಾನದಲ್ಲಿ ಆಟವಾಡಲು ಬರೋದು ಸಹಜ. ಈ ಸಮಯದಲ್ಲಿ ಬಾಯ್ತೆರೆದ ಕೊಳವೆ ಬಾವಿಗೆ ಮುಗ್ಧ ಕಂದಮ್ಮಗಳು ಬಲಿಯಾದ್ರೆ ಯಾರು ಹೊಣೆ? ಅನ್ನೋದು ಸ್ಥಳಿಯರ ಪ್ರಶ್ನೆಯಾಗಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ ಆಡಳಿತ ಮಂಡಳಿ‌ ಅನಾಹುತಕ್ಕೆ ಎಡೆ ಮಾಡಿಕೊಡೋ ಇಂಥಹ ಕೊಳವೆ ಬಾವಿಗಳನ್ನ ಮುಚ್ಚಿಸಿ ಮುಂದೆ ಎಂದಾದ್ರೂ ಆಗೋ ಅವಘಡವನ್ನ ತಪ್ಪಿಸಬೇಕು ಅಂತ ಆಗ್ರಹ ಪಡಿಸಿದ್ದಾರೆ. ಸ್ವತಃ ಅಲ್ಲಿನ ಸ್ಥಳಿಯರೇ ಈ ಅಪಾಯದ ಮನ್ಸೂಚನೆಯನ್ನ ಅರಿತು ಬಾಯ್ತೆರೆದ ಕೊಳವೆ ಬಾವಿಯ ದೃಶ್ಯಾವಳಿಯನ್ನ ವಿಡಿಯೋ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ಮಹಾಲಿಂಗೇಶ್ ಹಿರೇಮಠ. ಪವರ್ ಟಿವಿ. ಗದಗ

Exit mobile version