Site icon PowerTV

ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ‘ಹೌದು ಹುಲಿಯಾ‘ ಸೋತರೆ…?

ಬೆಂಗಳೂರು: ಉಪಚುನಾವಣೆಯ ಫಲಿತಾಂಶ ನಾಳೆ ಹೊರಬೀಳಲಿದ್ದು, ಫಲಿತಾಂಶದ ಮೇಲೆ ಸರ್ಕಾರದ ಅಳಿವು ಉಳಿವು ನಿಂತಿರುವುದರಿಂದ ರಿಸಲ್ಟ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ .

ಉಪಚುನಾವಣೆ ಫಲಿತಾಂಶ ಕಾಂಗ್ರೆಸ್ಸಿಗೆ ಎಷ್ಟು ಮಹತ್ವದ್ದೋ, ಸಿದ್ದರಾಮಯ್ಯನವರಿಗೂ ಅಷ್ಟೇ ಮಹತ್ವದ್ದಾಗಿದೆ. ಒಂದು ರೀತಿಯಲ್ಲಿ ಸಿದ್ದರಾಮಯ್ಯನವರ ಪ್ರತಿಷ್ಠೆಯ ಪ್ರಶ್ನೆ ಎನ್ನಬಹುದು. ಆದರೆ ಮತಗಟ್ಟೆ ಸಮೀಕ್ಷೆಯನ್ನು ನೋಡಿ ಹೇಳುವುದಾದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ಹಿನ್ನಡೆಯಾಗಲಿದೆ, ಸಿದ್ದರಾಮಯ್ಯ ಹಠತೊಟ್ಟು ವಿರೋಧ ಪಕ್ಷದ ಸ್ಥಾನ ಪಡೆದುಕೊಂಡಿದ್ದರು ಬಳಿಕ ನಡೆದ ಮೊದಲ ಚುನಾವಣೆ ಇದಾಗಿದೆ.

ಒಂದು ವೇಳೆ ಸಿದ್ದರಾಮಯ್ಯ ನಿರೀಕ್ಷಿತ ಸ್ಥಾನ ಗೆಲ್ಲಿಸಿ ಕೊಡುವಲ್ಲಿ ವಿಫಲಗೊಂಡರೆ, ಪಕ್ಷದಲ್ಲಿನ ವಿರೋಧಿ ಬಣ ಚುರುಕುಗೊಳ್ಳುವುದಂತೂ ಪಕ್ಕ, ರಾಜ್ಯ ಕಾಂಗ್ರೆಸ್ಸಿನ ಆಂತರಿಕ ಬೆಳವಣಿಗೆಗಳು ಯಾವ ಆಯಾಮಗಳನ್ನು ಬೇಕಾದರೂ ಪಡೆದುಕೊಳ್ಳಬಹುದಾಗಿದೆ . ಎಲ್ಲಾ ಹದಿನೈದು ಕ್ಷೇತ್ರಗಳಲ್ಲಿನ ಅಭ್ಯರ್ಥಿಗಳ ಅಯ್ಕೆ ವಿಚಾರದಲ್ಲೂ ಸಿದ್ದರಾಮಯ್ಯ ಮೇಲುಗೈ ಸಾಧಿಸಿದ್ದರು. ಮೂಲ ಕಾಂಗ್ರೆಸ್ಸಿಗರು ಸಿದ್ದರಾಮಯ್ಯ ವಿರುದ್ಧ ಮೊದಲಿನಿಂದಲೂ ಕತ್ತಿ ಮಸೆಯುತ್ತಿದ್ದಾರೆ, ಹಿರಿಯ ನಾಯಕ ಮುನಿಯಪ್ಪ ಸೇರಿದಂತೆ ಬಿ.ಕೆ. ಹರಿಪ್ರಸಾದ್ ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದರು, ಎಲ್ಲರೂ ನೀವು ಅಯ್ಕೆ ಮಾಡಿದ ಅಭ್ಯರ್ಥಿಗಳೇ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯು ನಿಮ್ಮದೇ ಎಂದು ಎಚ್ಚರಿಕೆಯನ್ನು ನೀಡಿದ್ದರು.

ಒಟ್ಟಾರೆ ಉಪಚುನಾವಣೆ ಫಲಿತಾಂಶ ಕೇವಲ ಯಡಿಯೂರಪ್ಪ ಸರ್ಕಾರದ ಭವಿಷ್ಯವಲ್ಲದೆ, ಸಿದ್ದರಾಮಯ್ಯನವರ ಭವಿಷ್ಯವು ನಿರ್ಧಾರವಾಗಲಿದೆ. 

Exit mobile version