Site icon PowerTV

ಗಂಗೂಲಿ -ದ್ರಾವಿಡ್ ಚರ್ಚೆ ಬೆನ್ನಲ್ಲೇ ಎನ್​ಸಿಎ ನಿರ್ಮಾಣಕ್ಕೆ ತಯಾರಿ..!

ಟೀಮ್ ಇಂಡಿಯಾದ ಮಾಜಿ ನಾಯಕರಾದ ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ ಇಂದು ಭಾರತ ಕ್ರಿಕೆಟ್ ಆಡಳಿತಕ್ಕೆ ಸಂಬಂಧಿಸಿದ ಪ್ರಮುಖ ಹುದ್ದೆಗಳಲ್ಲಿದ್ದಾರೆ. ಬಂಗಾಳದ ಹುಲಿ ಖ್ಯಾತಿಯ ಸೌರವ್ ಗಂಗೂಲಿ ಬಿಸಿಸಿಐನ ಅಧ್ಯಕ್ಷರು, ಕನ್ನಡಿಗ ರಾಹುಲ್ ದ್ರಾವಿಡ್ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ನಿರ್ದೇಶಕರು. ಬುಧವಾರ ಬೆಂಗಳೂರಲ್ಲಿ ಈ ಇಬ್ಬರು ನಾಯಕರು ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿದರು. ಗಂಗೂಲಿ ಬಿಸಿಸಿಐನ ಅಧ್ಯಕ್ಷರಾದ ಬಳಿಕ ದ್ರಾವಿಡ್​ ಅವರನ್ನು ಭೇಟಿಯಾಗಿದ್ದು ಇದೇ ಮೊದಲು.
ಇನ್ನು ಮಾತುಕತೆ ಬಳಿಕ ಗಂಗೂಲಿ, ದ್ರಾವಿಡ್ ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರೋ ಎನ್​ಸಿಎಗೆ ಮೀಸಲಿಟ್ಟಿರುವ ಜಾಗಕ್ಕೆ ಭೇಟಿ ನೀಡಿದ್ರು. ಕಳೆದ ವರ್ಷ ಕರ್ನಾಟಕ ರಾಜ್ಯ ಸರ್ಕಾರ ಬಿಸಿಸಿಐಗೆ 25 ಎಕರೆ ಜಾಗ ನೀಡಿತ್ತು. ಬಳಿಕ ಬಿಸಿಸಿಐ ಮನವಿ ಮೇರೆ ಮತ್ತೂ 15 ಎರಕೆ ಸೇರಿ ಒಟ್ಟು 40 ಎಕರೆ ಭೂಮಿಯನ್ನು ಮಂಜೂರು ಮಾಡಿತ್ತು. ಎನ್​ಸಿಎ ನಿರ್ಮಾಣಕ್ಕೆ ಬ್ಲೂ ಪ್ರಿಂಟ್ ರೆಡಿ ಮಾಡಿರೋ ಬಿಸಿಸಿಐ ಗುದ್ದಲಿ ಪೂಜೆ ಸಹ ನೆರವೇರಿಸಲಿದೆ.
ಗಂಗೂಲಿ -ದ್ರಾವಿಡ್ ಭೇಟಿ ಬೆನ್ನಲ್ಲೇ ಎನ್​ಸಿಎ ನಿರ್ಮಾಣಕ್ಕೆ ವೇಗ ಹೆಚ್ಚುತ್ತಿದೆ. 99 ವರ್ಷಗಳ ಕಾಲ ಸರ್ಕಾರಿ ಜಾಗವನ್ನು ಲೀಸಿಗೆ ಪಡೆದಿರುವ ಬಿಸಿಸಿಐ, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯನ್ನು ಚಿನ್ನಸ್ವಾಮಿ ಕ್ರೀಡಾಂಗಣದಿಂದ ಬೆಂಗಳೂರು ಹೊರವಲಯಕ್ಕೆ ಸ್ಥಳಾಂತರಿಸಲಿದೆ. ಅಲ್ಲಿ ಮೂರು ಕ್ರೀಡಾಂಗಣಗಳು, ಇಂಡೋರ್ ನೆಟ್ಸ್, ಆಡಳಿತ ಕಟ್ಟಡಗಳು, ಹಾಸ್ಟೆಲ್​ಗಳನ್ನು ನಿರ್ಮಿಸಲಾಗುತ್ತದೆ.

Exit mobile version